ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಬೆಳಕಿಗೆ ತರಲು ಹಾಗೂ ಅವರ ವಿಮೋಚನೆಗಾಗಿ ಅಕ್ಟೋಬರ್ 9 ರಂದು ಬುಧವಾರ ಚಿಕ್ಕಮಗಳೂರು ನಗರದಲ್ಲಿ ಕರ್ನಾಟಕ ಸ್ವಾಭಿಮಾನ ನಡಿಗೆಯನ್ನು ಆಯೋಜಿಸಲಾಗಿದೆ ಎಂದು ಸಂಗಮ ಸಂಸ್ಥೆಯ ಮುಖ್ಯಸ್ಥ ಮೇಘ ಮಲ್ನಾಡ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 9 ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಹನುಮಂತಪ್ಪ ವೃತ್ತದಿಂದ ಸ್ವಾಭಿಮಾನಿ ನಡಿಗೆ ಮೆರವಣಿಗೆ ಆರಂಭಗೊಂಡು ಎಂ.ಜಿ ರಸ್ತೆ ಮೂಲಕ ಸಾಗಿ 12.30 ಕ್ಕೆ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಲಿಂಗತ್ವ ಲೈಂಗಿಕ ಅಲ್ಪಸಂಖ್ಯಾತರು ಸಮಾಜದಲ್ಲಿ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ ನೀಡುವಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದರು.
ಈ ಸ್ವಾಭಿಮಾನಿ ನಡಿಗೆಯಲ್ಲಿ ಸಮಿತ್ರ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ, ಸಂಗಮ, ದಲಿತ ಸಂಘಟನೆಗಳ ಒಕ್ಕೂಟ, ದಲಿತ ಜನಜಾಗೃತಿ ವೇದಿಕೆ, ದಲಿತ ಸಂಘರ್ಷ ಸಮಿತಿ, ಪೌರ ಕಾರ್ಮಿಕರ ಸಂಘ, ಜನಧ್ವನಿ, ಸಂವಿಧಾನ ಸಂರಕ್ಷಣಾ ವೇದಿಕೆ, ಕನ್ನಡ ಸೇನೆ, ಭೀಮ್ ಆರ್ಮಿ, ಸಂಚನ ಟ್ರಸ್ಟ್ ಮತ್ತಿತರ ಸಂಘಟನೆಗಳು ಬೆಂಬಲ ನೀಡಿವೆ ಎಂದು ಹೇಳಿದರು.
ಕರ್ನಾಟಕ ಸ್ವಾಭಿಮಾನ ನಡಿಗೆಯಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತ್ರ ಪೌಂಡೇಷನ್ ಮುಖಂಡರಾದ ಅಂಜು, ಸಂಗಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಫಾತಿಮ ನಾಜಿಯಾ, ಖಜಾಂಚಿ ಪ್ರೀತಂ ಕೆ.ಆರ್ ಉಪಸ್ಥಿತರಿದ್ದರು.