ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರು ಸೇತುವೆ ಮೇಲೆ ಕಾರು ಬಿಟ್ಟು ನಾಪತ್ತೆಯಾಗಿದ್ದ ಉದ್ಯಮಿ ಬಿ.ಎಂ.ಮಮ್ತಾಝ್ ಅಲಿ ಅವರ ಮೃತದೇಹ ಸೋಮವಾರ ಕೂಳೂರು ಸೇತುವೆಯ ಬಳಿ ಪತ್ತೆಯಾಗಿದೆ.
ಮಂಗಳೂರು – ಕೂಳೂರು ಸೇತುವೆ ಬಳಿ ಬೆಳಿಗ್ಗೆ 10:40 ರ ಸುಮಾರಿಗೆ ಸ್ಥಳೀಯ ಮೀನುಗಾರರ ದೋಣಿಗೆ ಮೃತದೇಹ ಪತ್ತೆಯಾಗಿದೆ. ಮುಮ್ತಾಝ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ಈಗಾಗಲೇ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ 173ರ ಅಡಿ ಎಫ್ ಐ ಆರ್ ದಾಖಲಾಗಿದೆ.
ನಿನ್ನೆ ಮಂಗಳೂರಿನ ಕೂಳೂರಿನ ಸೇತುವೆ ಮೇಲೆ ಮುಮ್ತಾಜ್ ಅವರ BMW ಕಾರು ಪತ್ತೆಯಾಗಿತ್ತು. ಈಜು ತಜ್ಞ ಈಶ್ವರ್ ಮಲ್ಪೆ ಅವರು ಮುಮ್ತಾಜ್ ಶೋಧ ಕಾರ್ಯಾಚರಣೆ ನಡೆಸಿದ್ದರು. ಸತತ 28 ಗಂಟೆಗಳ ಕಾರ್ಯಾಚರಣೆ ಬಳಿಕ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. ಸಹೋದರನನ್ನ ನೆನೆದು ಮಾಜಿ ಶಾಸಕ ಮೊಯಿದ್ದೀನ್ ಬಾವ ಕಣ್ಣೀರು ಹಾಕಿದ್ದಾರೆ. ಬ್ಲಾಕ್ ಮೇಲ್ ನಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ನನ್ನ ಸಹೋದರ ಶೈಕ್ಷಣಿಕವಾಗಿ, ಧಾರ್ಮಿಕ ಕಾರ್ಯಗಳಿಂದ ಹೆಸರು ಗಳಿಸಿದ್ದ. ಆತನ ಪ್ರಚಾರವನ್ನ ಸಹಿಸದ ಕೆಲವು ಶಕ್ತಿಗಳು ಕುತಂತ್ರ ಮಾಡಿದ್ದಾರೆ. ಈ ಕಾರಣದಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ಆತನ ಫೋನ್ ಹಾಗೂ ವಾಟ್ಸ್ ಅಪ್ ಪರಿಶೀಲನೆ ಮಾಡುತ್ತಿದ್ದಾರೆ. ನನ್ನ ಸಹೋದರನ ಈ ಸ್ಥಿತಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಕಣ್ಣೀರು ಹಾಕಿದ್ದಾರೆ.
ಮೃತ ಮುಮ್ತಾಜ್ ಅಲಿ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ ಮತ್ತು ಮಾಜಿ MLC ಆಗಿರುವ ಬಿ.ಎಮ್.ಫಾರೂಕ್ ಅವರ ತಮ್ಮ. ಇವರು ಭಾನುವಾರ ಬೆಳ್ಳಂಬೆಳಗ್ಗೆ ನಾಪತ್ತೆಯಾಗಿದ್ದರು.
ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮಹಿಳೆ ಗ್ಯಾಂಗ್ ಅರೆಸ್ಟ್
ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಮ್ತಾಜ್ ಆಲಿ ಸಹೋದರ ಹೈದರ್ ದೂರಿನ ಮೇರೆಗೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆ ಪ್ರಚೋದನೆ ದೂರು ನೀಡಿರುವ ಸಂಬಂಧ ಮಹಿಳೆ ರೆಹಮತ್ ಹಾಗೂ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ದೂರು ದಾಖಲಾಗಿದೆ. ಸಹೋದರ ಮುಮ್ತಾಜ್ ಆಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರ ಗೌರವ ಹಾಳು ಮಾಡಲು ಮಹಿಳೆಯ ಬಳಸಿಕೊಂಡು ಷಡ್ಯಂತ್ರ ಮಾಡಿರುವ ಆರೋಪವಿದೆ. ರೆಹಮತ್ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರದ ಬೆದರಿಕೆ ಹಾಕಿದ್ದಾರೆ.
2024ರ ಜುಲೈನಿಂದ ಈವರೆಗೆ 50 ಲಕ್ಷ ವಸೂಲಿ ಮಾಡಿದ್ದಾರೆ. 25 ಲಕ್ಷ ಹಣವನ್ನು ಚೆಕ್ ಮೂಲಕವೂ ಮಹಿಳೆ ಪಡೆದಿದ್ದಾಳೆ. ಸತ್ತಾರ್ ಎಂಬಾತ ಮುಮ್ತಾಜ್ ಆಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಅಕ್ರಮ ಸಂಬಂಧ ಇದೆ ಎಂದು ಇವರು ನಿರಂತರ ಬ್ಲ್ಯಾಕ್ ಮೇಲ್ ಮಾಡಿದ್ದರು. ಜೀವ ಬೆದರಿಕೆ ಜತೆಗೆ ಮುಮ್ತಾಜ್ ಆಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ಸಹೋದರ ಮುಮ್ತಾಜ್ ಆಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.