ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಪ್ರಯುಕ್ತ ಅಕ್ಟೋಬರ್ 1ರಂದು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೊಸಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೆಸ್ಲೆ ಸಂಸ್ಥೆ, ರೈತ ಉತ್ಪಾದಕರ ಸಹಕಾರ ಸಂಘ, ಮೂಡಿಗೆರೆ ಬೆಳೆಗಾರರ ಸಂಘ ಮತ್ತು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜಿ.ಹೊಸಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಮತ್ತು ರೈತ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪೂರ್ಣೇಶ್ ಅವರ ಮನೆಯಂಗಳದಲ್ಲಿ ಕಾರ್ಯಕ್ರಮ ಆಯೋಜಿಸಿಲಾಗಿತ್ತು.
ಕಾರ್ಯಕ್ರಮದ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ ಕಾಫಿಯ ಮಹಿಮೆಯನ್ನು ವಿಶ್ವಕ್ಕೆ ಸಾರುವ ಸುಸಂದರ್ಭ ಅಂತರಾಷ್ಟ್ರೀಯ ಕಾಫಿ ದಿನವಾಗಿದೆ. ನಮ್ಮ ದೇಶದಲ್ಲಿಯೇ ಇನ್ನೂ ಕಾಫಿ ಬಳಕೆಯ ಬಗ್ಗೆ ಹೆಚ್ಚಿನ ಪ್ರಚಾರ ಆಗಬೇಕಾಗಿದೆ. ದೇಶದಲ್ಲಿ ಕಾಫಿ ಬಳಕೆ ಹೆಚ್ಚಾದರೆ ನಮ್ಮ ದೇಶದಲ್ಲಿ ಉತ್ಪಾದಿಸುವ ಕಾಫಿ ಇಲ್ಲಿಯೇ ಮಾರಾಟವಾಗುತ್ತದೆ ಇದರಿಂದ ಹೆಚ್ಚಿನ ಬೇಡಿಕೆ ಬಂದು ಕಾಫಿಗೆ ಉತ್ತಮ ಬೆಲೆ ಸಿಗಲು ಕಾರಣವಾಗುತ್ತದೆ ಎಂದರು. ಇಂದು ಕಾಫಿ ಉದ್ದಿಮೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕಾಫಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಕಾರ್ಮಿಕರ ಕೊರತೆ ಬಹುದೊಡ್ಡ ಸವಾಲಾಗಿದೆ. ಇಂತಹ ಸವಾಲುಗಳನ್ನು ಮೆಟ್ಟಿನಿಂತು ಇಂದು ಬೆಳೆಗಾರರು ಕಾಫಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಸರ್ಕಾರ ಕಾಫಿ ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಹಾಗೂ ಯುವಕರಿಗೆ ಕಾಫಿ ಬೆಳೆ ಹಾಗೂ ಉದ್ದಿಮೆಯ ಬಗ್ಗೆ ತರಬೇತಿ ನೀಡಬೇಕು ಎಂದರು.
ಹಿರಿಯ ಕಾಫಿ ಬೆಳೆಗಾರ ರಾಜೇಗೌಡ ಮಾತನಾಡಿ ಕಾಫಿ ಕೃಷಿಗೂ ಹವಾಮಾನ ಆಧಾರಿತ ಬೆಳೆವಿಮೆಯನ್ನು ವಿಸ್ತಿರಿಸಬೇಕು ಇದರಿಂದ ಹವಾಮಾನ ವೈಪರೀತ್ಯದಿಂದ ಬೆಳೆಹಾನಿಯಾದಾಗ ರೈತರಿಗೆ ಸಹಾಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪೂರ್ಣೇಶ್ ; ಅಂತರಾಷ್ಟ್ರೀಯ ಕಾಫಿ ದಿನವನ್ನು ಪ್ರತಿವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕಾಫಿ ಉದ್ದಿಮೆಗೆ ಸಂಬಂಧಿಸಿದ ಆಗುಹೋಗುಗಳ ಬಗ್ಗೆ ವ್ಯಾಪಕವಾದ ಚರ್ಚೆ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎ.ಟಿ. ಕೃಷ್ಣಮೂರ್ತಿ, ನೆಸ್ಲೆ ಸಂಸ್ಥೆಯ ಶಿವಕುಮಾರ್, ಗೋಣಿಬೀಡು ಜೇಸಿ ಸಂಸ್ಥೆ ಕಾರ್ಯದರ್ಶಿ ಜಗತ್, ರಾಜೇಗೌಡ, ಸಿ.ಎಸ್. ಚಂದ್ರಶೇಖರ್, ಎಸ್.ಪಿ.ಶಂಕರ್, ರಂಜಿತ್ ಕುಮಾರ್, ಗ್ರಾಮಸ್ಥರು ಉಪಸ್ಥಿತರಿದ್ದರು.