ಬೇಲೂರು ತಾಲ್ಲೂಕು ಚೀಕನಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಚಾಕು ಇರಿದು ಹತ್ಯೆ ಮಾಡಿದ್ದ ರೌಡಿಶೀಟರ್ ಮಧು ಎಂಬಾತನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕೊಲೆ ಆರೋಪಿ ರೌಡಿಶೀಟರ್ ಅರೇಹಳ್ಳಿ ಮೂಲದ ಮಧು ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಲು ಮುಂದಾದಾಗ ಆತ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಬೇಲೂರು ಇನ್ಸ್ಪೆಕ್ಟರ್ ವಿನಯ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಆದರೆ ಕ್ಯಾರೇ ಎನ್ನದೇ ಇನ್ಸ್ ಪೆಕ್ಟರ್ ಮೇಲೆ ಕಲ್ಲಿನಿಂದ ಹಲ್ಲೆಗೆ ಮುಂದಾಗಿದ್ದ. ಕೊನೆಗೆ ಇನ್ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಪ್ಟಂಬರ್ 14ರಂದು ಚೀಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮೆನ್ ಆಗಿದ್ದ ಗಣೇಶ್ ಎಂಬುವವರನ್ನು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ರೌಡಿಶೀಟರ್ ಮಧು ಎಂಬಾತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರು. ಇಂದು ಮುಂಜಾನೆ ಹಬ್ಬಕ್ಕೆಂದು ಅರೇಹಳ್ಳಿಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಬಿಕ್ಕೋಡು ಆನೆ ಕ್ಯಾಂಪ್ ಬಳಿಯಲ್ಲಿ ಆತನನ್ನು ಅಡ್ಡಗಟ್ಟಿದ್ದರು. ಆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ.
ಈ ವೇಳೆ ರೋಚಕ ಕಾರ್ಯಾಚರಣೆಯಲ್ಲಿ ಆತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ರೌಡಿಶೀಟರ್ ಡ್ರ್ಯಾಗನ್ ನಿಂದ ಅರೇಹಳ್ಳಿ ಠಾಣೆಯ ಕಾನ್ಸ್ಟೇಬಲ್ ಗಳಾದ ಶಶಿ ಮತ್ತು ಅಶೋಕ್ ಮೇಲೆ ಹಲ್ಲೆ ನಡೆಸಿದ್ದು, ಇನ್ಸ್ಪೆಕ್ಟರ್ ಮೇಲೆ ಕಲ್ಲು ತೂರಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ.
ಆರೋಪಿಯನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಸುಪರ್ದಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅರೇಹಳ್ಳಿ ಮೂಲದ ಆರೋಪಿ ರೌಡಿಶೀಟರ್ ಮಧು ಮೇಲೆ ಚಿಕ್ಕಮಗಳೂರು ಮತ್ತು ಅರೇಹಳ್ಳಿ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.