ಇಂದಿನ ದಿನಗಳಲ್ಲಿ ಸಮಾಜದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವವರಿಗೆ ತುಂಬಾ ಕಠಿಣದ ದಿನಗಳಾಗಿ ಬಾಸವಾಗುತ್ತಿರುವುದು ಕಂಡು ಬರುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟಿನ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ತಾಲೂಕು ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೆಲವು ಪ್ರಾಮಾಣಿಕ ಸಂಘ, ಸಂಸ್ಥೆಗಳು, ರಾಜಕಾರಣಿಗಳು ಸಮಾಜದಲ್ಲಿ ಎಷ್ಟೇ ಉತ್ತಮ ಕಾರ್ಯ ಮಾಡಿದರೂ ಅನಗತ್ಯವಾಗಿ ಅವರನ್ನು ದೂಷಿಸುವ ನಿಂದಿಸುವ, ಕೆಲಸ ದುಷ್ಟ ಶಕ್ತಿಗಳಿಂದ ನಡೆಯುತ್ತಿದೆ. ಇದರಿಂದ ಪ್ರಾಮಾಣಕರ ಆತ್ಮಸ್ಥೈರ್ಯವನ್ನು ಕುಗ್ಗಿ ಹೋಗುವ ತಮ್ಮ ಗೌರವಕ್ಕೆ ಅಂಜಿ ಸಮಾಜದ ಕೆಲಸದಿಂದ ದೂರ ಸರಿಯುವಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪ್ರಸಕ್ತ ಕಾಲದಲ್ಲಿ ಮುಖ್ಯ ವಾಹಿನಿಯಲ್ಲಿರುವ ದುಷ್ಟರು, ಭ್ರಷ್ಟರ ಆರ್ಭಟವೇ ಹೆಚ್ಚಾಗಿದೆ. ನಮ್ಮ ಸಂಸ್ಥೆಯ ಕಾರ್ಯಕರ್ತರು ಇದನ್ನೆಲ್ಲ ದಾಟಿ, ಸಮಾಜದ ಹಿತಕ್ಕಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಅವರು ಯೋಜನೆಯ ಸವಲತ್ತುಗಳ ಬಗ್ಗೆ ವಿವರಣೆ ನೀಡಿದರು. ಯೋಜನಾಧಿಕಾರಿ ಶಿವಾನಂದ್, ಶೌರ್ಯ ತಂಡದ ಪ್ರವೀಣ್ ಪೂಜಾರಿ ಮತ್ತಿತರರಿದ್ದರು.