2023-24ನೇ ಸಾಲಿನಲ್ಲಿ ಸಾಲ ವಸೂಲಾತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಮೂಡಿಗೆರೆ ಪಿಕಾರ್ಡ್ (PCARD) ಬ್ಯಾಂಕಿಗೆ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೆಪ್ಟಂಬರ್ 23ರಂದು ಬೆಂಗಳೂರು ಕೇಂದ್ರ ಕಛೇರಿಯಲ್ಲಿ ನಡೆದ ಬ್ಯಾಂಕಿನ 95ನೇ ವಾರ್ಷಿಕ ಮಹಾಸಭೆಯಲ್ಲಿ ಮೂಡಿಗೆರೆ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಹಳಸೆ ಶಿವಣ್ಣ ಮತ್ತು ವ್ಯವಸ್ಥಾಪಕ ಸಿ.ಎಂ. ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ್ ಉಪಸ್ಥಿತರಿದ್ದರು.
ವರದಿ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.90.55 ರಷ್ಟು ವಸೂಲಾತಿ ಸಾಧಿಸಿ ಪಿಕಾರ್ಡ್ ಬ್ಯಾಂಕ್ ಮೂಡಿಗೆರೆ ಶಾಖೆ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ.
ಈ ಸಂದರ್ಭದಲ್ಲಿ ರಾಜ್ಯ ಬ್ಯಾಂಕಿನ ಅಧ್ಯಕ್ಷರು, ಶಾಸಕರಾದ ಕೆ.ಷಡಾಕ್ಷರಿ, ಉಪಾಧ್ಯಕ್ಷರಾದ ಉಳುವಪ್ಪ ತಿಪ್ಪಣ್ಣ ದಾಸನೂರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ.ಸತೀಶ್, ಜಿಲ್ಲಾ ಜಿಲ್ಲಾ ನಿರ್ದೇಶಕರಾದ ಮಹೇಶ ಈ.ಆರ್ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಹಳಸೆ ಶಿವಣ್ಣ ; ಸಾಲ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವುದು ಮೂಡಿಗೆರೆ ಬ್ಯಾಂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಅತಿವೃಷ್ಟಿ ಪ್ರದೇಶವಾದರೂ ಸಹ ಬ್ಯಾಂಕಿನಿಂದ ಸಾಲಪಡೆದ ರೈತರು ಸಾಲ ಮರುಪಾವತಿಯಲ್ಲಿ ಆಸಕ್ತಿ ತೋರಿ ಸಹಕಾರ ತತ್ವಕ್ಕೆ ಮನ್ನಣೆ ನೀಡಿದ್ದಾರೆ. ಇದಕ್ಕೆ ಬ್ಯಾಂಕಿನ ನಿರ್ದೇಶಕರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದ ಶ್ರಮವೂ ಕಾರಣವಾಗಿದೆ. ಈ ಪ್ರಶಸ್ತಿ ತಾಲ್ಲೂಕಿನ ಎಲ್ಲಾ ರೈತಾಪಿ ವರ್ಗದವರಿಗೆ ಸಲ್ಲಬೇಕು ಎಂದರು.