ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಭಾಷೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಶನಿವಾರ ಮೂಡಿಗೆರೆ ತಾ.ಪಂ. ಇಒ ದಯಾವತಿ ಹಾಗೂ ಸಿಡಿಪಿಒ ಶೋಭಾ ಬಿ.ಮ್ಯಾಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ವಿನೋಧ್ ಮಾತನಾಡಿ, ಪಟ್ಟಣದ ಮಾರ್ಕೆಟ್ ರಸ್ತೆಯ ಸರಕಾರಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಸಾಮಾನ್ಯ ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಆನ್ ಲೈನ್ ಮೂಲಕ ಅರ್ಜಿ ಹಾಕುವಾಗ ಉರ್ದು ಭಾಷೆ ಆಯ್ಕೆ ಮಾಡಿಕೊಂಡರೆ ಮಾತ್ರ ಅರ್ಜಿ ಪೂರ್ಣಗೊಳ್ಳುತ್ತದೆ. ಕನ್ನಡ ಭಾಷೆ ಆಯ್ಕೆ ಮಾಡಿಕೊಂಡರೆ ಯು ಆರ್ ನಾಟ್ ಎಲಿಜಬೆಲ್ ಎಂದು ಅಪ್ಲಿಕೇಷನ್ ಮುಂದೆ ಸಾಗುವುದಿಲ್ಲ. ಇಂತಹ ಅವೈಜ್ಞಾನಿಕ ತಂತ್ರಾಂಶ ಮಾಡಿರುವವರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈಗಿರುವ ಆದೇಶವನ್ನು ಸರಕಾರ ಹಿಂಪಡೆದು ಎಲ್ಲಾ ಭಾಷಿಕರು ಅರ್ಜಿ ಸಲ್ಲಿಸುವಂತೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
.ಕನ್ನಡ ಸೇನೆ ಅಧ್ಯಕ್ಷ ಹೊರಟ್ಟಿ ರಘು ಮಾತನಾಡಿ, ಸರಕಾರವೇ ಕನ್ನಡ ಕೊಲ್ಲಲು ಹೊರಟಿರುವುದು ನಾಚಿಗೇಡಿನ ಸಂಗತಿ. ಅಂಗನವಾಡಿಗೆ ಎಲ್ಲಾ ಧರ್ಮ ಹಾಗೂ ಭಾಷೆಯ ಎಳೆ ವಯಸ್ಸಿನ ಮಕ್ಕಳು ಆಗಮಿಸುತ್ತಾರೆ. ಅಲ್ಲಿ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿರುವುದು ಖಂಡನೀಯ. ಕನ್ನಡಕ್ಕೆ ದ್ರೋಹ ಬಗೆಯುವ ಜತೆಗೆ ಇತರೆ ಜನಾಂಗದವರು ಈ ಹುದ್ದೆಗೆ ಅರ್ಜಿ ಸಲ್ಲಿಸದಂತೆ ವ್ಯವಸ್ಥಿತ ಪಿತೋರಿ ನಡೆದಿದೆ. ಈ ಅವೈಜ್ಞಾನಿಕ ಆದೇಶವನ್ನು 2 ದಿನದಲ್ಲಿ ರದ್ದುಗೊಳಿಸಬೇಕು. ಇಲ್ಲವಾದರೆ ಎಲ್ಲಾ ಕನ್ನಡಪರ ಸಂಘಟನೆಗಳ ಸಭೆ ಕರೆದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ ಗೌಡ, ಮುಖಂಡರಾದ ಎಂ.ಎ.ಶ್ರೇಷ್ಟಿ, ವಿಶ್ವ ಹಾರ್ಲಗದ್ದೆ, ಗೀತಾ ಛತ್ರಮೈದಾನ ಮತ್ತಿತರರಿದ್ದರು.