ಚಿಕ್ಕಮಗಳೂರು ನಗರದ ಸಂತ ಜೋಸೆಫ್ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆ ವತಿಯಿಂದ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟಿನ , ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇಂದು ಸಮಾಜದಲ್ಲಿ ವ್ಯಕ್ತಿತ್ವ ವಿಕಸನ ಆಗುವ ಬದಲು ವ್ಯಕ್ತಿತ್ವ ವಿನಾಶನ ಆಗುತ್ತಿದೆ. ಎಲ್ಲಿ ನೋಡಿದರೂ ದ್ವೇಷ ಅಸೂಯೆ ಜಾತಿ ಮತ ಪಂಥ ಅಂತ ಹೆಸರಿನಲ್ಲಿ ವಿದ್ಯಾವಂತರು ಅಂತ ತಮ್ಮನ್ನೇ ತಾವು ಹೇಳಿಕೊಳ್ಳುವ ಬಹುತೇಕರು ಘರ್ಷಣೆ ಸಂಘರ್ಷ ಮಾಡುವುದರ ಮುಖಾಂತರ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ನಾವು ಧಾರ್ಮಿಕವಾಗಿ ಯೋಚನೆ ಮಾಡುವುದಕ್ಕಿಂತ ಆಧ್ಯಾತ್ಮಿಕವಾಗಿ ಯೋಚನೆ ಮಾಡಿದರೆ ಇವತ್ತಿನ ಎಲ್ಲ ಸಮಸ್ಯೆಗಳಿಂದ ಹೊರಬಂದು ವ್ಯಕ್ತಿ ವಿಕಸನಗೊಂಡು ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡಲು ಸಹಕಾರಿ ಆಗುತ್ತದೆ ಎಂದರು.
ಭಾರತ ದೇಶ ಮುಂದಿನ ದಿನಗಳಲ್ಲಿ ಆಂತರಿಕ ಸಂಘರ್ಷ ಎದುರಿಸುವ ಅಪಾಯದಲ್ಲಿದ್ದು, ಸರ್ಕಾರಗಳು ಈಗಿಂದಲೇ ಆಧ್ಯಾತ್ಮಿಕ ಚಿಂತನೆಯ ಮುಖಾಂತರ ಭ್ರಾತೃತ್ವವನ್ನು ಬೆಳೆಸಿ ಧಾರ್ಮಿಕ ಕೋಮು ಭಾವನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಚಯವನ್ನು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು