ಮನುಷ್ಯ ಬೆಳಯುವ ವಾತಾವರಣದಿಂದ ಅವನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವ್ಯಕ್ತಿತ್ವ ವಿಕಸನವಾಗುವಂತಹ ವಾತಾವರಣ ಜೇಸಿ ಸಂಸ್ಥೆಯಲ್ಲಿ ಸಿಗುತ್ತದೆ ಎಂದು ಜೇಸಿಐ ಭಾರತ ಪೂರ್ವ ರಾಷ್ಟ್ರೀಯ ನಿರ್ದೇಶಕ ಟಿ.ಎನ್.ದೇವರಾಜ್ ಹೇಳಿದರು.
ಅವರು ಭಾನುವಾರ ಸಂಜೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಪ್ರೇರಣ ಜೇಸಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಾನವ ಅವಕಾಶ ಸಿಕ್ಕ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಮಾನವ ಜನ್ಮಕ್ಕೆ ಅರ್ಥ ಸಿಗುತ್ತದೆ ಎಂದ ಅವರು, ಭಾರತದಲ್ಲಿ ನಿರಂತರವಾಗಿ 50 ವರ್ಷ ಪೂರೈಸಿದ ಅನೇಕ ಜೇಸಿ ಘಟಕಗಳಿವೆ. ಅದರಲ್ಲಿ ಮೂಡಿಗೆರೆ ಕೂಡ ಒಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಉದ್ಯಮಿ ಶ್ರೀನಾಥ್ ಮಾತನಾಡಿ, ಹಿಂದೆ ಬೆಂಗಳೂರು ಮಹಾ ನಗರ ಗಾರ್ಡನ್ ಸಿಟಿಯಾಗಿತ್ತು. ಈಗ ಗಾರ್ಬೇಜ್ ಸಿಟಿಯಾಗುತ್ತಿದೆ. ಇದಕ್ಕೆ ಮಾನವ ಪ್ರಕೃತಿ ಮೇಲೆ ನಡೆಸುತ್ತಿರುವ ದೌರ್ಜನ್ಯವೇ ಮೂಲ ಕಾರಣವಾಗಿದೆ. ಪ್ರಕೃತಿ ಉಳಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಪರಿಸರ ಉತ್ತಮವಾಗಿದೆ. ಅದನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಹಾಸ್ಯ ನಟ ರಮೇಶ್ ಯಾದವ್, ಜೇಸಿ ವಲಯಾಧ್ಯಕ್ಷೆ ಆಶಾ ಜೈನ್, ಮೂಡಿಗೆರೆ ಜೆಸಿಐ ಅಧ್ಯಕ್ಷ ಸುಪ್ರಿತ್ ಕಾರಬೈಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅತ್ತಿಗೆರೆ ಸುರೇಶ್, ಬಿಳಗುಳ ಶಾಲೆಯ ದೈಹಿಕ ಶಿಕ್ಷಕ ಸುರೇಶ್, ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಲಕ್ಷ್ಮೀ ಪ್ರಜ್ಞಾ ಕೋಡದಿಣ್ಣೆ, ಪಿಹೆಚ್ ಡಿ ಪದವಿ ಗಳಿಸಿದ ಪ್ರಾಪ್ತಿ ಜನ್ನಾಪುರ, ಸಿಎ ಪದವಿ ಪಡೆದ ಯುಕ್ತ, ಕಬ್ಬಡ್ಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಹಿತೈಷಿ ಗೌಡ ಪಿ.ಎಂ ಗಬ್ಬಳ್ಳಿ ಇವರುಗಳನ್ನು ಗೌರವಿಸಲಾಯಿತು.
ಜೇಸಿಐ ಉಪಾಧ್ಯಕ್ಷ ಕೆ.ಕೆ.ಪ್ರದೀಪ್ ಕುನ್ನಳ್ಳಿ ಅವರಿಗೆ ಕಮಲಪತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಜೇಸಿ ನಿಕಟಪೂರ್ವ ಅಧ್ಯಕ್ಷೆ ಸವಿತಾ ರವಿ, ಸುದೀಪ್ ತ್ರಿಪುರ, ಇಂಪಾ ಸವೀನ್, ದಿವ್ಯ ಸುಪ್ರಿತ್, ಕವಿತಾ ಸಂತೋಷ್, ಶ್ರಾವ್ಯ ಉದಯ್, ಮಾನ್ವಿಕ್ ಮತ್ತಿತರರಿದ್ದರು.