ಸಂಬಂಧಿ ಮಹಿಳೆಯೊಬ್ಬರಿಗೆ ಲಿವರ್ ದಾನ ಮಾಡಿ ಅವರ ಜೀವ ಉಳಿಸಿದ್ದ ಮಂಗಳೂರು ನಗರದ ಉಪನ್ಯಾಸಕಿ ಅರ್ಚನಾ ಕಾಮತ್ (33) ತಮ್ಮ ಜೀವ ಕಳೆದುಕೊಂಡಿದ್ದಾರೆ. ಮಂಗಳೂರು ನಗರದ ಪ್ರಸಿದ್ಧ ಲೆಕ್ಕಪರಿಶೋಧಕ(ಸಿಎ) ಚೇತನ್ ಕಾಮತ್ ಅವರ ಪತ್ನಿ ಅರ್ಚನಾ ಕಾಮತ್ ಅವರಿಗೆ ತಮ್ಮ ದಾನಶೂರ ಗುಣವೇ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ.
ಚೇತನ್ ಕಾಮತ್ ಅವರ ಚಿಕ್ಕಪ್ಪನ ಹೆಂಡತಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಲಿವರ್ ಕಸಿ ಮಾಡಲು ಬೇರೆ ವ್ಯಕ್ತಿಯ ಲಿವರ್ ನ ಒಂದಷ್ಟು ಭಾಗ ಬೇಕಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಕೂಡ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಉಪನ್ಯಾಸಕಿ ಅರ್ಚನಾರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗಾಗಿ ಅರ್ಚನಾ ಲಿವರ್ ಭಾಗದ ದಾನಕ್ಕೆ ಒಪ್ಪಿದ್ದರು.
ಅದರಂತೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಅರ್ಚನಾರ ಲಿವರ್ನ ಭಾಗಶಃ ಭಾಗ ತೆಗೆದು ಸಂಬಂಧಿ ಮಹಿಳೆಗೆ ಜೋಡಿಸುವ ಶಸ್ತಚಿಕಿತ್ಸೆ ನಡೆದಿತ್ತು. ಅಲ್ಲದೆ ಆರೋಗ್ಯದಿಂದಿದ್ದ ಅರ್ಚನಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.
ನಾಲ್ಕು ದಿನಗಳ ಹಿಂದೆ ಅರ್ಚನಾ ಏಕಾಏಕಿ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಭಾನುವಾರ ಅರ್ಚನಾ ಮೃತಪಟ್ಟಿದ್ದಾರೆ.
ಲಿವರ್ ಜೋಡಿಸಲ್ಪಟ್ಟ ಮಹಿಳೆ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ. ಮಂಗಳೂರು ನಗರದ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅರ್ಚನಾ ಬಳಿಕ ಶ್ರೀನಿವಾಸ ನಾಯಕ್ ಎಂಬಿಎ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು.
ಅರ್ಚನಾ ಪತಿ ಮತ್ತು ನಾಲ್ಕು ವರ್ಷದ ಪುತ್ರನನ್ನು ಅಗಲಿದ್ದಾರೆ. ಅವರ ಕುಟುಂಬ ಈಗ ಶೋಕಸಾಗರದಲ್ಲಿ ಮುಳುಗಿದೆ.