ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, 2023-24ನೇ ಸಾಲಿನಲ್ಲಿ ರೂ. 17.04 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 9 ರಷ್ಟು ಡಿವಿಡೆಂಟ್ ಘೋಷಣೆ ಮಾಡಿದೆ.
ಶುಕ್ರವಾರ ಸಂಘದ ಆವರಣದಲ್ಲಿ ಸಂಘದ 68ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಜಿ.ಕೆ. ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಜಿ.ಕೆ. ದಿವಾಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ; 2023-24ನೇ ವರ್ಷದ ಅಂತ್ಯಕ್ಕೆ ಸಂಘದ ಸ್ವಂತ ಬಂಡವಾಳವು 195.92 ಲಕ್ಷ, ಒಟ್ಟು ಠೇವಣಿಯು 140.88 ಲಕ್ಷ, ಪಡೆದ ಸಾಲ ರೂ. 1072.85 ಲಕ್ಷ, ದುಡಿಯುವ ಬಂಡವಾಳವು 1536.63 ಲಕ್ಷ ವಾಗಿದ್ದು, ಮುಂದಿನ ಸಾಲಿಗೆ 2 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
2023-24ನೇ ಸಾಲಿನಲ್ಲಿ ಒಟ್ಟು 1285.88 ಲಕ್ಷ ಸಾಲ ವಿತರಣೆ ಮಾಡಿದ್ದು, ಇದರಲ್ಲಿ ಕೃಷಿಗಾಗಿ ನೀಡಿದ ಸಾಲ ರೂ. 1078.85 ಲಕ್ಷವಾಗಿದೆ. ಶೇ 100ರಷ್ಟು ವಸೂಲಾತಿ ಪ್ರಗತಿ ಸಾಧಿಸಲಾಗಿದೆ. ಸಂಘದ, ಆಡಳಿತ ಮಂಡಳಿ ಸದಸ್ಯರು, ಸಂಘದ ಸಿಬ್ಬಂದಿವರ್ಗ ಹಾಗು ಶೇರುದಾರರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಸಹಕಾರ ಕ್ಷೇತ್ರವು ರೈತರಿಗೆ ಹತ್ತು ಹಲವು ರೀತಿಯ ಸೇವೆಯನ್ನು ಒದಗಿಸುತ್ತಿದೆ. ರೈತರಿಗೆ ರೂ. 3 ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಸದಸ್ಯರು ಸಂಘದಲ್ಲಿ ಹೆಚ್ಚಿನ ವ್ಯವಹಾರ ಮಾಡುವುದರ ಮೂಲಕ ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಸಹಕಾರ ಚಳುವಳಿಯನ್ನು ಮುಂದೆ ಕೊಂಡೊಯ್ಯುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ವಾರ್ಷಿಕ ಆಯವ್ಯಯ ಮತ್ತು ಮುಂಬರುವ ಸಾಲಿಗಾಗಿ ಸಂಘದ ಕಾರ್ಯಚಟುವಟಿಕೆಗಳ ವಿವರವನ್ನು ಮಂಡಿಸಿದರು. ಲೆಕ್ಕಣಿಗರಾದ ಶ್ರೀಮತಿ ಗೀತಾ ವಾರ್ಷಿಕ ವರದಿ ಮಂಡಿಸಿದರು.
ಇದೇ ಸಂದರ್ಭದಲ್ಲಿ ಸಂಘದಲ್ಲಿ 22 ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಎಸ್.ಆರ್. ರವೀಂದ್ರನಾಥ್ ಅವರನ್ನು ಗೌರವಿಸಲಾಯಿತು. ಹಾಗೆಯೇ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತಮ ಸಾಧನೆ ತೋರಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಕಾಫಿ ಮಂಡಳಿ ಅಧಿಕಾರಿ ವಿಶ್ವನಾಥ್ ಅವರು ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ಇರುವ ಸಹಾಯಧನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಜಿ. ವೆಂಕಟೇಶ್, ನಿರ್ದೇಶಕರಾದ ಕೆ.ಎಲ್. ಚಂದ್ರೇಗೌಡ, ಬಿ.ಬಿ. ವಿನೇಶ್, ಎಂ.ಎಸ್. ಸಂತೋಷ್, ಬಿ.ಪಿ. ಕೃಷ್ಣೇಗೌಡ, ಎಂ.ಪಿ. ಅರುಣ್, ಹೆಚ್.ಕೆ. ಲಿಂಗಪ್ಪ, ಶ್ರೀಮತಿ ಜಯಮ್ಮ, ಶ್ರೀಮತಿ ಸುಮ ರವಿಕುಮಾರ್, ಜಿ.ಟಿ. ರಮೇಶ್, ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ನಿತಿನ್ ಪಟೇಲ್ ಎಸ್.ಜೆ. ಉಪಸ್ಥಿತರಿದ್ದರು.