ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬರನ್ನು ಬರ್ಬರ ಹತ್ಯೆ ಮಾಢಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಚೀಕನಹಳ್ಳಿ ಸಮೀಪದ ಕುಂಬಾರಹಳ್ಳಿ ಗ್ರಾಮದ ಗಣೇಶ (27) ಕೊಲೆಯಾದ ವ್ಯಕ್ತಿ.
ಕುಂಬಾರಹಳ್ಳಿ ಗ್ರಾಮದ ಕುಮಾರ ಎನ್ನುವವರ ಪುತ್ರ ಗಣೇಶ ಚೀಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಾಟರ್ಮ್ಯಾನ್ ಆಗಿದ್ದ. ಶುಕ್ರವಾರ ರಾತ್ರಿ ಚೀಕನಹಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಗಣೇಶ ನಿಂತಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಅರೇಹಳ್ಳಿ ಮೂಲದ ರೌಡಿಶೀಟರ್ ಮಧು ಎಂಬಾತ ಗಣೇಶನ ಜತೆ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿ ಮಧು ಚಾಕುವಿನಿಂದ ಗಣೇಶನಿಗೆ ಇರಿದಿದ್ದಾನೆ.
ತೀವ್ರ ರಕ್ತಸ್ರಾವವಾಗಿ ಗಣೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಬಳಿಕ ಆರೋಪಿ ಎಸ್ಕೇಪ್ ಆಗಿದ್ದಾನೆ.
ಅರೇಹಳ್ಳಿ ಇಂದಿರನಗರ ಮೂಲದ ಮಧು ಬೆಂಗಳೂರಿನಲ್ಲಿ ವಾಸವಾಗಿದ್ದ ಇತ್ತೀಚೆಗೆ ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಬಂದಿದ್ದ ಎನ್ನಲಾಗಿದೆ. ಈತನ ಮೇಲೆ ಈ ಹಿಂದೆಯೂ ಅನೇಕ ಪ್ರಕರಣ ದಾಖಲಾಗಿದ್ದು, ಈತನ ಮೇಲೆ ರೌಡಿಶೀಟ್ ಓಪನ್ ಮಾಡಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಣೇಶನ ಮೇಲೆ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸ್ವಗ್ರಾಮದಲ್ಲಿ ಅಂತಿಮಸಂಸ್ಕಾರ ನೆರವೇರಿಸಲಾಗಿದೆ. ಘಟನೆಯಿಂದ ಚೀಕನಹಳ್ಳಿ ಭಾಗದ ಜನ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.