ಹಿಂದಿನಿಂದಲೂ ಸರ್ವಧರ್ಮದ ಜನರು ಸಾಮರಸ್ಯದಿಂದ ಬಾಳಬೇಕೆಂದು ಗಣಪತಿ ಉತ್ಸವ ಆಚರಣೆ ಮಾಡಿಕೊಂಡು ಬಂದಿರುವ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಶ್ರೀ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ 108 ತೆಗಿನಕಾಯಿ ಗಣಪತಿ ಹೋಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಬಾಲ ಗಂಗಾಧರ್ ತಿಲಕ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಎಲ್ಲಾ ಪ್ರಜೆಗಳು ಒಟ್ಟಾಗಿ ಕೂಡಿಕೊಂಡು ಸ್ವಾತಂತ್ರ್ಯ ಹೋರಾಟ ಹಾಗೂ ಸಾಮರಸ್ಯದಿಂದ ಬದುಕಬೇಕೆಂದು ಗಣಪತಿ ಉತ್ಸವ ಆರಂಭಿಸಿದರು. ಆಗ ಅವರು ಸ್ವದೇಶಿ ಶಿಕ್ಷಣ, ಸಂಸ್ಕøತಿ ಉಳಿಯಬೇಕು. ಮಾದಕ ವಸ್ತುಗಳು ಸಂಪೂರ್ಣ ನಿಯಂತ್ರಣವಾಗಬೇಕು. ಸ್ವಾತಂತ್ರ್ಯದಿಂದ ಎಲ್ಲವೂ ಸದೃಢವಾಗುತ್ತದೆ ಎಂಬ ಕನಸು ಕಂಡಿದ್ದರು. ಆದರೆ ಈಗ ಅಶಾಂತಿ, ಧರ್ಮಗಳ ನಡುವೆ ಗಲಭೆಗಳೆ ಅಧಿಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಯುವ ಜನತೆ ವಿದೇಶಿ ಸಂಸ್ಕøತಿಯತ್ತ ಮಾರು ಹೋಗುತ್ತಿದ್ದಾರೆ. ಪೋಷಕರು ಹಾಗೂ ಮಕ್ಕಳ ನಡುವೆ ಇರುವ ಅಮೂಲ್ಯ ಸಂಬಂಧ ಕಳಚಿ, ಅಂತರ ಸೃಷ್ಟಿಯಾಗುತ್ತಿದೆ. ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ. ಇದರ ನಡುವೆ ಹೊಲಸು ರಾಜಕಾರಣದಿಂದ ಧರ್ಮ, ಜಾತಿ ಹೆಸರಿನಲ್ಲಿ ನಿರಂತರ ಗಲಭೆ ಹಾಗೂ ಅಶಾಂತಿ ಉಂಟಾಗುತ್ತಿದೆ. ಅಲ್ಲದೇ ಹಿಂದೂ ಧರ್ಮದ ಆಚರಣೆ ನಡೆಸಲು ಅಡ್ಡಿ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸದಿದ್ದರೆ ನಮ್ಮ ದೇಶ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದು ಹೇಳಿದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಗಣಪತಿ ಸಮಿತಿ ಅಧ್ಯಕ್ಷ ಪಿ.ಜಿ.ಅನುಕುಮರ್, ಹಾಸ್ಯನಟ ರಮೇಶ್ ಯಾದವ್, ಮಂಚೇಗೌಡ, ದೀಪಕ್ ದೊಡ್ಡಯ್ಯ, ಯೋಗೇಶ್ ಪೂಜಾರಿ ಉಪಸ್ಥಿತರಿದ್ದರು.