ಸಮಾಜ ಸೇವೆ ಮಾಡುವುದು ಒಂದು ಕೆಲಸವಲ್ಲ. ಅದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ ಎಂದು ಖ್ಯಾತ ಚಲನಚಿತ್ರ ನಟಿ, ಬಿಗ್ ಬಾಸ್ ಖ್ಯಾತಿಯ ಸಂಗೀತ ಶೃಂಗೇರಿ ಹೇಳಿದರು.
ಅವರು ಸೋಮವಾರ ಸಂಜೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಪ್ರೇರಣ ಜೇಸಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಲೇಡಿ ಜೇಸಿ ಡೇ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಗಂಡು ಹೆಣ್ಣು ಎಂಬ ತಾತ್ಸಾರ ಮನೋಭಾವ ಯಾರಲ್ಲೂ ಇರಬಾರದು. ಇಬ್ಬರೂ ಕೈ ಹಿಡಿದು ಮುಂದೆ ಸಾಗಿದರೆ ಬದುಕಿನಲ್ಲಿ ಯಶಸ್ಸು ಹಾಗೂ ಸಮಾಜ ಪರಿವರ್ತನೆ ಸಾಧ್ಯ. ಹೆಣ್ಣು ಮಕ್ಕಳಿಗೆ ಅಪ್ಪನ ಮೇಲೆ ಹಾಗೂ ಅಪ್ಪನಿಗೆ ಹಣ್ಣು ಮಕ್ಕಳ ಮೇಲೆ ಪ್ರೀತಿ ಹೆಚ್ಚಾಗಿರುತ್ತದೆ. ತಂದೆಯ ಪ್ರೋತ್ಸಾಹ ಮಗಳಿಗೆ ದೊರೆತಾಗ ಆ ಹೆಣ್ಣು ಮಗಳು ಎಂತಹ ಸಾಧನೆ ಬೇಕಾದರೂ ಮಾಡುವ ಹುಮ್ಮಸ್ಸು ಮೂಡುತ್ತದೆ ಎಂದ ಅವರು, ಮಾನವ ತನ್ನ ಜೀವಿತಾವದಿಯಲ್ಲಿ ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕಬೇಕು. ಹಸಿದವರಿಗೆ ಅನ್ನ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಮೂಡಿಗೆರೆ ಪ.ಪಂ. ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಮಾತನಾಡಿ, ತನ್ನ ಕುಟುಂಬ ನಿರ್ವಹಣೆ ಮಾಡುವ ಜತೆಗೆ ಎಲ್ಲಾ ರಂಗದಲ್ಲಿಯೂ ಗುರುತಿಸಿಕೊಳ್ಳುವ ಸಾಮರ್ಥ್ಯ ಮಹಿಳೆಯರಿಗಿದೆ. ಮಹಿಳೆಯರು ಈ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಲು ಅನೇಕ ಅವಕಾಶಗಳು ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವಂತ ಮನೋಭಾವನೆ ಎಲ್ಲರಲ್ಲೂ ಮೂಡುವಂತಾಗಬೇಕು ಎಂದು ಹೇಳಿದರು.
ಪ.ಪಂ. ಮಾಜಿ ಅಧ್ಯಕ್ಷೆ ಸರೋಜ ಸುರೇಂದ್ರ ಮಾತನಾಡಿ ಸಂಸಾರ ಮತ್ತು ಸಮಾಜ ಎರಡು ರಂಗಗಳಲ್ಲಿ ಮಹಿಳೆ ತನ್ನ ಛಾಪು ಒತ್ತಿದ್ದಾಳೆ. ಮಹಿಳೆಗಿರುವ ಸಹನೆ ಮತ್ತು ಆತ್ಮವಿಶ್ವಾಸ ಅವಳನ್ನು ಕಠಿಣ ಸನ್ನಿವೇಶಗಳನ್ನು ಎದುರಿಸಲು ಸದಾ ಪ್ರೇರಣೆಯಾಗಿವೆ. ಒಂದು ಕೈಯಿಂದ ಚಪ್ಪಾಳೆ ಆಗುವುದಿಲ್ಲ ಹಾಗೆಯೇ ಹೆಣ್ಣು ಮತ್ತು ಗಂಡು ಪರಸ್ಪರ ಸಹಕಾರ ನೀಡಿದರೆ ಮಾತ್ರ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿಯರಾದ ರೇಣುಕಮ್ಮ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಾಗರತ್ನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಡಿ ಜೇಸಿ ವಿಭಾಗದ ಅಧ್ಯಕ್ಷೆ ದಿವ್ಯ ಸುಪ್ರಿತ್ ವಹಿಸಿದ್ದರು.
ಜೇಸಿ ಅಧ್ಯಕ್ಷ ಸುಪ್ರಿತ್ ಕಾರಬೈಲ್, ಸುದೀಪ್ ತ್ರಿಪುರ, ಶ್ರಾವ್ಯ ಉದಯ್, ನಿಶ್ಚಿತಾ ಯತೀಶ್, ಕವಿತಾ ಸಂತೋಷ್ ಮತ್ತಿತರರಿದ್ದರು.
ಸಭಾ ಕಾರ್ಯಕ್ರಮದ ನಂತರ ಜೇಸಿ ಕುಟುಂಬ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
https://youtu.be/KhsjPfCD4ow?si=pzDM2eD4sFg6Rq2m