ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಜೇಸಿಐ ಮತ್ತು ಕಾಫಿಮಂಡಳಿ ಮೂಡಿಗೆರೆ ವತಿಯಿಂದ ಚಕ್ಕುಡಿಗೆ ಮತ್ತು ಹೆಗ್ಗರವಳ್ಳಿ ಗ್ರಾಮಸ್ಥರಿಗೆ ಸಹಾಯಧನ ಮತ್ತು ಕಾಫಿ ಕೊಳೆರೋಗದ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು .
ಕಾಫಿ ಮಂಡಳಿಯ ಕಾರ್ಯಗಾರದಲ್ಲಿ ಜೇಸಿಐ ಕಾರ್ಯದರ್ಶಿ ಜಗತ್ ಬಿ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡಿಗೆರೆ ಕಾಫಿ ಮಂಡಳಿಯ ಎಸ್ಎಲ್ಓ ವಿಶ್ವನಾಥ್ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು ಪ್ರಸಕ್ತ 2024-25 ಸಾಲಿಗೆ ಕಾಫಿ ಮಂಡಳಿ ವತಿಯಿಂದ ಕಾಫಿ ತೋಟದ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕಾಫಿ ಮರುನಾಟಿ, ನೀರಾವರಿ ಯೋಜನೆ ಅಡಿ ಕೆರೆ, ರಿಂಗ್ ಬಾವಿ, ಸ್ಪಿಂಕ್ಲರ್ ಇರಿಗೇಶನ್, ಕಾಫಿ ಗೌಡನ್, ಕಾಫಿ ಕಣ, ಹಳ ಹೊಡೆಯುವ ಯಂತ್ರ, ಸ್ಪ್ರೇಮೆಷಿನ್, ಮರ ಕಟಾವು ಮಾಡುವ ಮೆಷಿನ್ ಹಾಗೂ ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳಿಗೆ ಮತ್ತಿತರ ಕಾರ್ಯಚಟುವಟಿಕೆಗಳಿಗೆ ಸಹಾಯಧನ ದೊರೆಯಲಿದ್ದು, ಕಾಫಿ ತೋಟ ಹೊಂದಿರುವ ಎಲ್ಲಾ ಬೆಳಗಾರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೂ ಅರ್ಜಿ ಸಲ್ಲಿಸಲು ಸಪ್ಟೆಂಬರ್ 30 2024 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಜೇಸಿಐ ಗೋಣಿಬೀಡು ವತಿಯಿಂದ ಹೆಗ್ಗರವಳ್ಳಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪೆನ್ ಮತ್ತು ಪೆನ್ಸಿಲ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿ ಅರ್ ಯುವರಾಜ್, ಹೆಚ್.ವಿ ಕಾಳೆಗೌಡ, ಹೆಚ್.ಎನ್ ಉಮೇಶ್, ಮುತ್ತಣ್ಣ ಎ ಎಂ, ದೇವಕಿ ಮಂಜುನಾಥ್, ಯಶೋಧ, ಸುರೇಶ, ಗೋಪಾಲ ಸಿ.ಎಸ್, ನಾಗೇಶ್ ಹೆಚ್ ಕೆ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ : ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ