ಗ್ರಾಮೀಣ ಪ್ರದೇಶದ ವಸತಿರಹಿತ ಅರ್ಹ ಪಲಾನುಭವಿಗಳ ಪಟ್ಟಿ ಮಾಡಲು ರಾಜೀವ್ ಗಾಂಧಿ ವಸತಿ ನಿಗಮದಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಗ್ರಾಮಪಂಚಾಯಿತಿಗಳಿಗೆ ಅವಕಾಶ ಕಲ್ಪಿಸಲಾಗಿದ್ದರು ಕೂಡ ಕೆಲವು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರಚಾರ ಮತ್ತು ಅಗತ್ಯ ಕ್ರಮ ಕೈಗೊಳ್ಳದೆ ಪಂಚಾಯಿತಿ ಸದಸ್ಯರಿಗೂ ಕನಿಷ್ಟ ಮಾಹಿತಿ ನೀಡದೆ ಗ್ರಾಮೀಣ ಭಾಗದ ನಿವೇಶನ ರಹಿತ ಬಡವರಿಗೆ ಅಗತ್ಯ ಮೂಲಭೂತ ಸೌಕರ್ಯದ ಅವಕಾಶ ವಂಚಿಸುತ್ತಿರುವುದನ್ನು ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ರಸಾದ್ ಬಿ.ಇ ರವರು ತೀವ್ರವಾಗಿ ಖಂಡಿಸಿರುತ್ತಾರೆ.
ಸ್ವಾತಂತ್ರ್ಯ ಬಂದು ಸುಮಾರು 78 ವರ್ಷಗಳಾದರೂ ಇಂದಿಗೂ ಹಲವು ಕೂಲಿ ಕಾರ್ಮಿಕ ಮತ್ತು ಇತರೆ ಬಡಕುಟುಂಬಗಳು ನಿವೇಶನ ರಹಿತರಾಗಿ ಹುಟ್ಟಿದ ಅದೇ ಗ್ರಾಮಗಳಲ್ಲಿ ಎಸ್ಟೇಟ್ ಲೈನ್, ಬಾಡಿಗೆ ಮನೆ, ಟಾರ್ಪಲ್ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆ ಇಂತಹ ಬಡ ಕುಟುಂಬಗಳ ಗುರುತಿಸಿ ಅವರನ್ನು ನಿವೇಶನರಹಿತರ ಪಟ್ಟಿಯಲ್ಲಿ ಸೇರಿಸಲು ಸ್ಥಳೀಯ ಆಡಳಿತ ವ್ಯವಸ್ಥೆಯಾದ ಗ್ರಾಮಪಂಚಾಯಿತಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರು ಸಂಬಂಧಿಸಿದ ಅಧಿಕಾರಿಗಳು ಇಂತಹ ಒಂದೊಳ್ಳೆ ಕಾರ್ಯಕ್ರಮವನ್ನು ಜನಸಾಮಾನ್ಯರಿಗೆ ತಲುಪಿಸದೆ, ಕನಿಷ್ಠ ಗ್ರಾಮಪಂಚಾಯಿತಿ ಸದಸ್ಯರಿಗೂ ಈ ಬಗ್ಗೆ ಮಾಹಿತಿ ನೀಡದೆ ಬಡವರ ಬಗ್ಗೆ ನಿರ್ಲಕ್ಷ್ಯತೋರುತ್ತಿರುತ್ತಿರುವುದು ಅಕ್ಷಮ್ಯ ಅಪರಾದ ಮತ್ತು ಬಡವರನ್ನು ಬಡವರನ್ನಾಗಿಯೇ ಉಳಿಸುವ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಇದುವರೆಗೂ ಅಗತ್ಯಕ್ರಮಕೈಗೊಳ್ಳದೆ ನಿರ್ಲಕ್ಷ್ಯವಹಿಸುತ್ತಿರುವ ಗ್ರಾಮಪಂಚಾಯಿತಿಗಳ ಪತ್ತೆಹಚ್ಚಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸು ನೀಡಿ ನಿಯಮಾವಳಿಯಂತೆ ಪ್ರಚಾರ, ಸಭೆಗಳ ಮೂಲಕ ಅರ್ಹ ನಿವೇಶನ ರಹಿತರ ಪಟ್ಟಿ ತಯಾರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.