ಮಾದಕ ವಸ್ತುಗಳ ಸೇವನೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ಆರನೇ ಸ್ಥಾನದಲ್ಲಿದ್ದು ಅಪಾಯದಲ್ಲಿದೆ, ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದಿನ ದಿನಗಳಲ್ಲಿ ಯುವಕರು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿಯಾದ ಪ್ರಶಾಂತ್ ಚಿತ್ರಗುತ್ತಿ ಹೇಳಿದರು.
ಚಿಕ್ಕಮಗಳೂರು ತಾಲೂಕು ಆಲ್ದೂರಿನ ಶ್ರೀ ಮಾನಸ ವಿದ್ಯಾಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಜನ ಜಾಗೃತಿ ವೇದಿಕೆಯಿಂದ ಸ್ವಾಸ್ಥ್ಯ ಸಂಕಲ್ಪದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಸಮೀಕ್ಷೆಯಲ್ಲಿ ಮಾದಕ ವಸ್ತು ಸೇವನೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಆರನೇ ಸ್ಥಾನದಲ್ಲಿ ಇದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಗೆ ಹೊರಪ್ರದೇಶಗಳಿಂದ ಅತಿಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಪ್ರವಾಸೋದ್ಯಮ ಹೆಚ್ಚಾದಂತೆ ಮಾದಕ ವಸ್ತುಗಳ ಸಾಗಾಟ ಮತ್ತು ಸೇವನೆಯೂ ಹೆಚ್ಚಾಗುತ್ತಿದೆ. ವಿಶೇಷವಾಗಿ ಯುವಜನರು ಮತ್ತು ವಿದ್ಯಾರ್ಥಿಗಳು ಮಾದಕ ವಸ್ತು ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ, ಇದರ ಬಗ್ಗೆ ಸಮಾಜ ಮತ್ತು ಆಡಳಿತ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದರು.
ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಇಂದಿನ ಯುವ ಶಕ್ತಿ ಮಾದಕ ವಸ್ತುಗಳು ಹಾಗೂ ಮಾದಕ ವಿಷಯಗಳನ್ನು ದೂರ ಇಟ್ಟು, ನಾಗರಿಕ ಸಮಾಜದ ಕಡೆ ಹೆಜ್ಜೆ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಡಾ. ಡಿ ವೀರೇಂದ್ರ ಹೆಗಡೆಯವರು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಎಂಬ ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳು ಹಾಗೂ ಜನರನ್ನು ಜಾಗೃತಿ ಮಾಡುತ್ತಿದ್ದಾರೆ ಎಂದು ಹೇಳಿದರು. ಸರಕಾರಗಳು ಪ್ರಜೆಗಳನ್ನು ರಕ್ಷಣೆ ಮಾಡುತ್ತಾರೆ ಎಂಬ ತಪ್ಪುಕಲ್ಪನೆಯನ್ನು ಬಿಟ್ಟು ನಿಮ್ಮ ರಕ್ಷಣೆ ಸುರಕ್ಷತೆಯನ್ನು ನೀವೇ ಮಾಡಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಸಂಸ್ಥೆಯ ಮಾಲೀಕರು ಹಾಗೂ ಪ್ರಾಂಶುಪಾಲರು ಆದ ಸಾವಿತ್ರಿಯವರು ಮಾತನಾಡಿ ಶ್ರೀ ಧರ್ಮಸ್ಥಳ ಸಂಸ್ಥೆಯು ಅತ್ಯಂತ ಮೌಲ್ಯ ಆಧಾರಿತ ಕೆಲಸವನ್ನು ಮಾಡುತ್ತಿದ್ದು ಈಗಿನ ಸಮಾಜಕ್ಕೆ ಇದರ ಅಗತ್ಯ ತುಂಬಾ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಲಲಿತಾ ಹಾಗೂ ಅತಿಥಿಗಳಾಗಿ ಸುನಿತಾ ಹಾಗೂ ಪ್ರಾಂಶುಪಾಲರು ಮತ್ತು ಇನ್ನಿತರು ಇದ್ದರು.