ಚಿಕ್ಕಮಗಳೂರು ತಾಲ್ಲೂಕು ಕಸಬಾ ಹೋಬಳಿ ಉಪ್ಪಳ್ಳಿ ಗ್ರಾಮ (ಶಾಂತಿನಗರ, ಕಲ್ಡೊಡ್ಡಿ) ದಲ್ಲಿ ಹರಿಜನ ಸಮುದಾಯಕ್ಕೆ ಸೇರಿದ ಗ್ರಾಮಠಾಣಾ ಜಾಗವನ್ನು ಭೂಕಬಳಿಸಿ ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಂದು ಬೆಳಿಗ್ಗೆ ನಗರದ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಇದೇ ಗ್ರಾಮದ ಸರ್ವೆ ನಂಬರ್ 319 ರಲ್ಲಿ ಹರಿಜನರು ವಾಸಿಸುತ್ತಿದ್ದು, 1953-54 ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಸಮುದಾಯಕ್ಕೆ ಸೇರಿದ ಭೂಮಿಯನ್ನು ಕಬಳಿಕೆ ಮಾಡಿ, ಖಾಸಗಿ ಲೇಔಟ್ ನಿರ್ಮಾಣ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
3.25 ಎಕರೆ ಜಾಗವಿರುವ ಈ ಮಂಜೂರಾತಿಯನ್ನು ರದ್ದುಮಾಡಿ ದಲಿತರ ಪುನರ್ ವಸತಿ ನಿವೇಶನಕ್ಕಾಗಿ ಅನುವು ಮಾಡಬೇಕು. ಹಿಂದಿನ ನಮ್ಮ ಪೂರ್ವಜರು ಇದ್ದ ಈ ಗ್ರಾಮ ಪ್ಲೇಗ್ನಂತಹ ಮಹಾ ಮಾರಿ ರೋಗಕ್ಕೆ ತುತ್ತಾಗಿ ಗ್ರಾಮವನ್ನು ತೊರೆದಿದ್ದು ಇಂದು ನಾವು ಮನೆಗಳಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ ಎಂದಿದ್ದಾರೆ.
ನಿವೇಶನ ರಹಿತರಾದ ನಮಗೆ ಕೂಡಲೇ ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ತೆರವುಗೊಳಿಸಿ ನಿವೇಶನ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಾಜು.ಆರ್, ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್, ಮಲ್ಲೇಶ, ಪ್ರಕಾಶ್ ಮತ್ತಿತರರು ವಹಿಸಿದ್ದರು.