October 5, 2024

ಇನ್ಸೂರೆನ್ಸ್ ಹಣ ದೋಚಲು ದಂಪತಿ ಖತರ್ನಾಕ್ ಸ್ಕೆಚ್ ಹಾಕಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಗಂಡಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಟೋರಿಯಸ್ ದಂಪತಿ ಅಮಾಯಕನನ್ನು ಕೊಂದು ಇನ್ಸೂರೆನ್ಸ್ ಹಣ ಹೊಡೆಯಲು ಸ್ಕೆಚ್ ಹಾಕಿದ್ದರು. ಪತಿ ಅಪಘಾತದಲ್ಲಿ ಸತ್ತಿದ್ದಾನೆ ಎಂದು ಪತ್ನಿ ನಾಟಕವಾಡಿ ವಿಮೆ ಹಣ ಕ್ಲೈಮ್ ಮಾಡಲು ಪ್ಲಾನ್ ಮಾಡಿದ್ದರು. ಇದೀಗ ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡಿರುವ ರಹಸ್ಯ ಬಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ  ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ ?

ಆಗಸ್ಟ್ 12 ರಂದು ಅರಸೀಕೆರೆ ತಾಲ್ಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿಯ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವದ ಪಕ್ಕದಲ್ಲಿ ಲಾರಿ ಮತ್ತು ಕಾರು ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿದ ಗಂಡಸಿ ಠಾಣೆಯ ಪೊಲೀಸರು ಅಪರಿಚಿತ ಮೃತದೇಹವನ್ನು ಪತ್ತೆಹಚ್ಚಲು ಮುಂದಾಗಿದ್ದು, ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದರು. ಆಗಸ್ಟ್ 13 ರಂದು ಶಿಲ್ಪರಾಣಿ ಎಂಬಾಕೆ ಜಿಲ್ಲಾಸ್ಪತ್ರೆಗೆ ಬಂದು ಅಪರಿಚಿತ ಶವವನ್ನು ಪತ್ತೆ ಹಚ್ಚಿ ಇದು ನನ್ನ ಪತಿ ಮುನಿಶ್ವಾಮಿಗೌಡ ಎಂದು ಗುರುತಿಸಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಬೆಂಗಳೂರು ಸಮೀಪದ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗ ಗ್ರಾಮಕ್ಕೆ ಕೊಂಡೊಯ್ದು  ಅಂತ್ಯಸಂಸ್ಕಾರ ಮಾಡಿದ್ದಾಳೆ

ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಅನುಮಾನಾಸ್ಪದ ಗಾಯದ ಗುರುತು ಪತ್ತೆಯಾಗಿದ್ದರಿಂದ ಪೊಲೀಸರು ಈ ಬಗ್ಗೆ ತನಿಖೆಗೆ ಮುಂದಾಗಿದ್ದರು.  ಹೊಸಕೋಟೆ ಯಲ್ಲಿರುವ ಮುನಿಶ್ವಾಮಿಗೌಡ ನಿವಾಸಕ್ಕೆ ತೆರಳಿ ಶಿಲ್ಪರಾಣಿ ವಿಚಾರಣೆಗೆ ಮುಂದಾಗಿದ್ದರು. ಆದರೆ ಶಿಲ್ಪರಾಣಿ ಈ ವೇಳೆ ನಾನು ಗಂಡನನ್ನು ಕಳೆದುಕೊಂಡು ದು:ಖದಲ್ಲಿದ್ದೇನೆ ಎಂದು ಪೊಲೀಸರನ್ನು ವಾಪಾಸ್ಸು ಕಳಿಸಿದ್ದಳು.

ಕೃತ್ಯ ಬಯಲಾಗಿದ್ದು ಹೇಗೆ ?

ಎಲ್ಲವೂ ತನ್ನ ಪ್ಲ್ಯಾನ್ ಪ್ರಕಾರವೇ ನಡೆದಿದೆ ಎಂದು ಮುನಿಶ್ವಾಮಿಗೌಡ ಕೆಲ ದಿನಗಳ ಕಾಲ ತಲೆಮರೆಸಿಕೊಂಡಿದ್ದನು. ಹೊರಗೆ ಏನು ನಡೆಯುತ್ತಿದೆ ಎಂದು ತಿಳಿಯದೆ ಹಾಗೂ ಈ ಕೃತ್ಯದಿಂದ ಭಯಗೊಂಡು ಅನಾರೋಗ್ಯಕ್ಕೆ ತುತ್ತಾಗಿದ್ದ. ತೀವ್ರ ಆತಂಕಕ್ಕೆ ಒಳಗಾಗಿ ಬೇರೆ ದಾರಿಯಿಲ್ಲದೇ ಸ್ವಲ್ಪ ದಿನಗಳ ಬಳಿಕ ತನ್ನ ಸಂಬಂಧಿಯಾಗಿರುವ ಶಿಡ್ಲಘಟ್ಟ ಪೊಲೀಸ್  ಇನ್ಸ್ಪೆಕ್ಟರ್ ಶ್ರೀನಿವಾಸ್ ಮುಂದೆ ಮುನಿಶ್ವಾಮಿಗೌಡ ಹಾಜರಾಗಿದ್ದನು.  ಅಂತ್ಯಸಂಸ್ಕಾರಕ್ಕೂ ಸಹ ಹೋಗಿಬಂದಿದ್ದ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರಿಗೆ ಮೃತಪಟ್ಟಿದ್ದ ಮುನಿಶ್ವಾಮಿಗೌಡ ತನ್ನ ಎದುರು ಜೀವಂತವಾಗಿ ಬಂದು ನಿಂತಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದು,  ಅವನನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ನಾನು ಕಾರು ಚಲಾಯಿಸುವಾಗ ಆಕ್ಸಿಡೆಂಟ್ ಮಾಡಿ ಓರ್ವ ಸಾವನ್ನಪ್ಪಿದ್ದು, ಇದರಿಂದ ಭಯಗೊಂಡು ತಲೆಮರೆಸಿಕೊಂಡಿದ್ದೆ ಎಂದು ಮುನಿಶ್ವಾಮಿಗೌಡ ಕತೆಕಟ್ಟಿದ್ದಾನೆ. ಅನುಮಾನಗೊಂಡು  ಇನ್ಸ್ಪೆಕ್ಟರ್ ಶ್ರೀನಿವಾಸ್ ಮುನಿಶ್ವಾಮಿಗೌಡನನ್ನು ಗಂಡಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ನೀಡದೇ ಪತ್ನಿ ಶಿಲ್ಪರಾಣಿಯನ್ನು ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ಆಗ ಮತ್ತದೇ ನಾಟಕವಾಡಿದ್ದಾಳೆ. ಬದುಕಿದ್ದ ಗಂಡನನ್ನು ತೋರಿಸಿದಾಗ ದಂಪತಿಗಳ ರೂಪಸಿದ್ದ ನಾಟಕ ಬಯಲಾಗಿದೆ. ಈ ಮರ್ಡರ್  ಪ್ರಕರಣದಲ್ಲಿ ಭಾಗಿಯಾಗಿರುವ ಹಲವರ ಕುರಿತು ತನಿಖೆ ನಡೆಯುತ್ತಿದ್ದು. ಇನ್ನೂ ಕೊಲೆಯಾದ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಕೊಲೆಗಡುಕ ದಂಪತಿಯನ್ನು ವಶಕ್ಕೆ ಪಡೆದು ಗಂಡಸಿ ಪೊಲೀಸರು ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಹತ್ಯೆ ಮಾಡಿದ್ದು ಹೇಗೆ ?

ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಮುನಿಶ್ವಾಮಿಗೌಡ ಟೈರ್ ಅಂಗಡಿಯನ್ನು ಇಟ್ಟುಕೊಂಡಿದ್ದ. ವ್ಯವಹಾರದಲ್ಲಿ ವಿಪರೀತ ಸಾಲ ಮಾಡಿಕೊಂಡಿದ್ದ ಕಾರಣದಿಂದ ಮುನಿಶ್ವಾಮಿಗೌಡ ತನ್ನ ಪತ್ನಿ ಶಿಲ್ಪರಾಣಿ ಹಾಗೂ ಸ್ನೇಹಿತರ ಜೊತೆಗೂಡಿ ತನ್ನ ಹೆಸರಿನಲ್ಲಿದ್ದ ದೊಡ್ಡ ಮೊತ್ತದ ಜೀವವಿಮೆ ಮತ್ತು ಅಪಘಾತ ವಿಮೆ ಹಣವನ್ನು ವಾಮಮಾರ್ಗದಲ್ಲಿ ಪಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದ. ತನ್ನನ್ನೇ ಹೋಲುವ ಅನಾಥವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ಮುನಿಶ್ವಾಮಿಗೌಡ ಹಾಗೂ ಅವನ ಪತ್ನಿ ಪರಿಚಯ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದಾದ ಕೆಲ ದಿನಗಳ ನಂತರ ದಂಪತಿ ಅವನನ್ನು ಕೊಂದು ಇನ್ಸೂರೆನ್ಸ್ ಹಣ ದೋಚಲು ಸ್ಕೆಚ್ ಹಾಕಿದ್ದರು. ಒಂದು ದಿನ ಮುನಿಶ್ವಾಮಿಗೌಡ ಆ ವ್ಯಕ್ತಿಯನ್ನು ಶಿಡ್ಲಘಟ್ಟಗೆ ಹೋಗಿ ಬರೋಣ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದನು. ಕಾರು ಪಂಕ್ಚರ್ ಆಗಿದೆ ಎಂದು ಗೊಲ್ಲರಹೊಸಳ್ಳಿ ಗೇಟ್ ಬಳಿ ಮುನಿಶ್ವಾಮಿಗೌಡ ಕಾರು ನಿಲ್ಲಿಸಿದನು. ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ ವ್ಯಕ್ತಿಯನ್ನು ಟೈರ್ ಚೇಂಜ್ ಮಾಡುವಂತೆ ಹೇಳಿದ್ದನು. ಆಕ್ಸಿಡೆಂಟ್ ರೀತಿ ಬಿಂಬಿಸಲು ಲಾರಿಯೊಂದನ್ನು ಬುಕ್ ಮಾಡಿದ್ದು, ಆ ಲಾರಿ ಕಾರನ್ನೇ ಹಿಂಬಾಲಿಸಿಕೊಂಡು ಬಂದಿತ್ತು. ಟೈರ್ ಚೇಂಜ್ ಮಾಡುತ್ತಿದ್ದ ವೇಳೆ ಮುನಿಶ್ವಾಮಿಗೌಡ ತನ್ನ ಜೊತೆ ಕರೆತಂದಿದ್ದ ವ್ಯಕ್ತಿಯ ಕುತ್ತಿಗೆಗೆ ಚೈನ್ ಹಾಕಿ ರಸ್ತೆಗೆ ಎಳೆದಿದ್ದನು. ಅದೇ ಸಮಯಕ್ಕೆ ಲಾರಿ ಆತನ ಮೇಲೆ ಹತ್ತಿಸಿ ಕೊಲೆ ಮಾಡಲಾಗಿತ್ತು.   ಕೊಲೆ ಮಾಡಿದ ಬಳಿಕ ಲಾರಿಯಿಂದ ಕಾರಿಗೆ ಡಿಕ್ಕಿ ಹೊಡೆದು ನಿಲ್ಲಿಸಿ ಕಾರು ಲಾರಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ