2013 ರಿಂದ ರಾಜ್ಯದಲ್ಲಿ ಪ.ಜಾತಿ, ಪಂಗಡದ ಅಭಿವೃದ್ಧಿಗೆಂದು ಬಜೆಟ್ ನಲ್ಲಿ ಮೀಸಲಿರಿಸಿದ್ದ 70ಸಾವಿರ ಕೋಟಿ ರೂ. ಅನುದಾನವನ್ನು ಬೇರೆ ಯೋಜನೆಗಳಿಗೆ ಸರ್ಕಾರ ವರ್ಗಾಯಿಸಿಕೊಂಡಿದೆ. ಇದರಿಂದ ಆ ಜನಾಂಗದವರ ಅಭಿವೃದ್ಧಿ ಕುಂಠಿತವಾಗಿದೆ. ಅವರಿಗೆ ಮೀಸಲಾದ ಅನುದಾನವನ್ನು ಮರಳಿ ಒಪ್ಪಿಸಬೇಕೆಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಒತ್ತಾಯಿಸಿದರು.
ಬಿಎಸ್ಪಿ ಕ್ಷೇತ್ರ ಸಮಿತಿಯಿಂದ ಇತ್ತೀಚೆಗೆ ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಎಸ್ಸಿ, ಎಸ್ಟಿ ಮತ್ತು ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಕಾಯ್ದೆಯ ಪ್ರಕಾರ ಬಜೆಟ್ ನಲ್ಲಿ ಮೀಸಲಿರಿಸಿದ್ದ ಅನುದಾನವನ್ನು ಆ ಜನಾಂಗದವರ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕೆಂದು ಉಲ್ಲೇಖಿಸಲಾಗಿತ್ತು. 2018ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಇತರೆ ಯೋಜನೆಗಳಿಗೂ ಎಸ್ಸಿ, ಎಸ್ಟಿ , ಟಿಎಸ್ಪಿ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು. 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 15 ಸಾವಿರ ಕೋಟಿ ಅನುದಾನವನ್ನು ಇತರ ಯೋಜನೆಗಳಿಗೆ ಬಳಸಿ ಕೊಳ್ಳಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ಯೋಜನೆಯ 29 ಸಾವಿರ ಕೋಟಿ ರೂ. ಅನುದಾನವನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 25 ಸಾವಿರ ಕೋಟಿ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆರಿದವರು ಪ.ಜಾತಿ, ಪಂಗಡದವರಿಗೆ ದ್ರೋಹವೆಸಗಿದ್ದಾರೆ. ಇಂತಹ ನೀತಿಗೆಟ್ಟ ಆಡಳಿತದಿಂದ ಜನ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಲ್.ಬಿ.ರಮೇಶ್ ಮಾತನಾಡಿ, ಎಸ್ಸಿ.ಎಸ್ಟಿ.ಟಿಎಸ್ಪಿ ಅನುದಾನವನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಈ ಮೂರು ಪಕ್ಷದ ಸರ್ಕಾರಗಳು ನುಂಗಿ ಹಾಕಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವ್ಯಾಸಂಗ ಕುಂಟಿತಗೊಳ್ಳುವಂತಾಗಿದೆ. ಈ ಸಮುದಾಯದ ಲಕ್ಷಾಂತರ ಮಂದಿಗೆ ನೀಡಬಹುದಾಗಿದ್ದ ಉದ್ಯೋಗಕ್ಕೂ ಕತ್ತರಿ ಪ್ರಯೋಗಿಸಲಾಗಿದೆ. ಭೂ ರಹಿತರು, ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ಜಾಗ ನೀಡಲು ಅವಕಾಶವಿತ್ತು. ಅದಕ್ಕೂ ಸರ್ಕಾರ ಕಲ್ಲು ಹಾಕಿದೆ. ರೋಗಿಗಳಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡಲು ಅವಕಾಶವಿತ್ತು. ಅಲ್ಲದೆ ವಾಸದ ಮನೆ, ಸಿಸಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಕೈಗಾರಿಕೆ, ಸ್ವಸಹಾಯ ಗುಂಪುಗಳಿಗೆ ಸಾಲ ಯೋಜನೆ, ಬಾಡಿಗೆಗೆ ವಾಹನ ನೀಡುವ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದ್ದ ಅನುದಾನವನ್ನು ಸರ್ಕಾರಗಳು ಬೇರೆ ಯೋಜನೆಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು.
ತಹಸಿಲ್ದಾರ್ ರಾಜಶೇಖರ ಮೂರ್ತಿ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಜಾಕೀರ್ ಅಲಿ ಖಾನ್, ಪಿ.ಕೆ.ಮಂಜುನಾಥ್, ಬಕ್ಕಿ ಮಂಜು, ಮಹೇಶ್, ಬಾಬಣ್ಣ, ಶಬ್ಬೀರ್ ಹುಸೇನ್, ಹೊನ್ನೇಶ್, ವಸಂತ್, ಕುಮಾರ್, ಎಂ.ಡಿ.ಶಂಕರ್, ಅಭಿಜಿತ್, ಸಯ್ಯದ್, ಹಮೀದ್, ಆಸಿಫ್, ಲಕ್ಷ್ಮಣ್ ದೊಡ್ಡಯ್ಯ, ಮಂಜುನಾಥ್, ಯು.ಎಸ್.ಸುರೇಶ್, ಸತೀಶ್, ರಾಮು ಹರೀಶ್ ನಾಗೇಶ್ ಸಂಜೀವ, ರಮೇಶ್ ಇತರರಿದ್ದರು.