ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆಯ ಮಂಡಲುಬೈಲ್ ಗದ್ದೆಯಲ್ಲಿ ಪ್ರೆಂಡ್ಸ್ ಯುವಕರ ತಂಡದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ ನಡೆಸಲಾಯಿತು.
ಕ್ರೀಡಾಕೂಟದ ಆಯೋಜನೆಯ ಅಧ್ಯಕ್ಷ ಮಧುಕುಮಾರ್ ಮಾತನಾಡಿ’ ಹಿಂದಿನ ಕಾಲದಲ್ಲಿ ಕೃಷಿ ಸಂಸ್ಕೃತಿಯಿಂದ ಕೆಸರು ನಮ್ಮ ಜೀವನವಾಗಿತ್ತು. ಅದನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ.ಮೂಲ ಸಂಸ್ಕೃತಿ ಉಳಿವಿಗೂ ಕೆಸರುಗದ್ದೆಯ ಕ್ರೀಡಾಕೂಟ ಪ್ರೇರಣೆಯಾಗಿವೆ’ಎಂದರು.
ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಚರ್ ಡಿ.ವಿ.ರೇಣುಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ’ಭೂಮಿ ತಾಯಿ ನಂಬಿ ಕೃಷಿ ಮಾಡಿದರೆ ಅದು ಎಂದಿಗೂ ಕೃಷಿಕರ ಕೈ ಬಿಡುವುದಿಲ್ಲ.ಹಾಗೆಯೇ ಆಧುನಿಕತೆಯ ಭರಾಟೆಯಲ್ಲಿ ದೇಶಿ ಆಟಗಳು ಮರೆಯಾಗುತ್ತಿವೆ. ಕೆಸರುಗದ್ದೆ ಓಟ, ಇತರ ಆಟಗಳು ಮನಸಿಗೆ ಮುದ ನೀಡುವುದಲ್ಲದೇ ದೇಹದ ಸಾಮಾರ್ಥ್ಯ ಹಾಗೂ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ’ಎಂದರು.
ತರುವೆ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ’ ಮಲೆನಾಡಿನ ಮಳೆಗೆ ನೆನೆದು ಆಡುವ ಆಟಗಳು ದೇಹಕ್ಕೆ ಹುಮ್ಮಸ್ಸಿನ ಜೊತೆಗೆ ಸಂಭ್ರಮ ನೀಡುತ್ತವೆ’ ಎಂದರು.
ಮೈಸೂರಿನ ಕ್ರೀಡಾಪಟು, ರೈಲ್ವೆ ಉದ್ಯೋಗಿ ಮರ್ಸಿ ಜಾಯ್ನಾರ್ ಟೇಪ್ ಕತ್ತರಿಸುವ ಮೂಲಕ ಕ್ರೀಡಾಂಗಣಕ್ಕೆ ಚಾಲನೆ ನೀಡಿದರು. ಸುರಿವ ಮಳೆ ಲೆಕ್ಕಿಸದೇ ಮಹಿಳೆಯರು,ಪುರುಷರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಗೌರವಾಧ್ಯಕ್ಷ ಜಿ.ವೇಣುಗೋಪಾಲ್ ಪೈ ಮಾತನಾಡಿದರು. ಧಾನಿ ದಿನೇಶ್ ಶೆಟ್ಟಿ, ಬಿ.ಎಸ್.ವಿಕ್ರಂ, ಪ್ರವೀಣ್ ಪೂಜಾರಿ, ಶರತ್ ಕುಮಾರ್, ಪರೀಕ್ಷಿತ್ ಜಾವಳಿ, ಸಂಜಯ್ ಗೌಡ, ಪ್ರಶಾಂತ್, ಎ.ಎಸ್.ಅಶ್ವಥ್, ನವೀನ್ ಹಾವಳಿ, ಚಂದನ್ , ರಾಘವೇಂದ್ರ, ಸಾಗರ್ ಗೌಡ, ವಿಕ್ರಂ ಬಿದಿರುತಳ, ವಿನಯ್, ಎ.ಆರ್.ಅಭಿಲಾಷ್ ಮತ್ತಿತರರು ಇದ್ದರು