ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹತರಾದವರು ಮೋಸಹೋಗುತ್ತಿರುವ ಘಟನೆಗಳು ಹೆಚ್ಚು ಹೆಚ್ಚು ನಡೆಯುತ್ತಿದ್ದು, ಅಪರಿಚಿತರ ಸ್ನೇಹ ಮಾಡಲು ಹೋಗಿ ಯುವತಿಯೋರ್ವಳು ಅತ್ಯಾಚಾರಕ್ಕೆ ಗುರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ನಡೆದಿದೆ.
ಇನ್ಸ್ಟಾಗ್ರಾಮ್ ನಲ್ಲಿ ಪರಿಚಿತವಾದ ಯುವತಿಗೆ ಮದ್ಯದಲ್ಲಿ ಮಾದಕ ವಸ್ತು ನೀಡಿ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. 21 ವರ್ಷದ ಹಿಂದೂ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ತಾಫ್ ಬಂಧಿತ ಮುಖ್ಯ ಆರೋಪಿಯಾಗಿದ್ದು, ಸಂತ್ರಸ್ತ ಯುವತಿಗೆ ಅಲ್ತಾಫ್ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದನು ಎನ್ನಲಾಗಿದೆ. ಅಲ್ತಾಫ್ ಈಗಾಗಲೇ ವಿವಾಹಿತನಾಗಿದ್ದಾನೆ ಎಂದು ತಿಳಿದುಬಂದಿದೆ.
ಸಂತ್ರಸ್ತೆ ಮತ್ತು ಆರೋಪಿ ಮೂರು ತಿಂಗಳಿಂದ ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಯ ಹೊಂದಿದ್ದರು. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ. ಆಕೆ ಬಂದಾಗ ಕಾರಿನಲ್ಲಿ ಅಪಹರಿಸಿದ್ದಾನೆ. ಈ ನಡುವೆ ಮದ್ಯಪಾನದಲ್ಲಿ ಏನೋ ಬೆರೆಸಿ ನೀಡಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಆರೋಪಿ ಅಲ್ತಾಫ್ನನ್ನು ಬಂಧಿಸಲಾಗಿದೆ. ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಸವೇದ್ ರಿಚರ್ಡ್ ಕೊಡ್ರೋಸ್ ಎಂಬಾತನನ್ನು ಬಂಧಿಸಲಾಗಿದ್ದು ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಲಾಗಿದೆ. ಸಂತ್ರಸ್ತೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಕಾರ್ಕಳ ಠಾಣೆಯ ಸಮೀಪ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ. ಪೋಷಕರ ಹೇಳಿಕೆಯಂತೆ ಅತ್ಯಾಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಯುವತಿಯ ಹೇಳಿಕೆ ಮತ್ತು ವೈದ್ಯಕೀಯ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಈಗ ಮುಂದಾಗಿದ್ದಾರೆ.
ಘಟನೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಖಂಡಿಸಿದ್ದು, ಇದೊಂದು ಲವ್ ಜಿಹಾದ್ ಪ್ರಕರಣವಾಗಿದೆ. ಹಿಂದೂ ಹುಡುಗಿಯರನ್ನು ಗುರಿಯಾಗಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರ ಮತ್ತು ಪೊಲೀಸರು ಆರೋಪಿಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ವರದಿಯಾಗುತ್ತಿವೆ. ಇದೊಂದು ಹೇಯ ಕೃತ್ಯವಾಗಿದ್ದು, ಇದು ಪೂರ್ವಯೋಜಿತ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆರೋಪಿಗಳಿಗೆ ಪೊಲೀಸರ ಕ್ರಮದ ಭಯವಿಲ್ಲ, ಪೊಲೀಸರು ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರನ್ನು ಸ್ನೇಹಿತರನ್ನಾಗಿಸಿಕೊಳ್ಳುವ ಮುನ್ನ ಬಹಳ ಎಚ್ಚರಿಕೆಯಿಂದ ಇರಬೇಕು, ಫೇಸ್ಬುಕ್, ಇನ್ ಸ್ಟಾ ಗ್ರಾಂ, ವಾಟ್ಸಾಪ್ ಮುಂತಾದ ವೇದಿಕೆಗಳಲ್ಲಿ ಅರಿವಿಲ್ಲದೇ ಅಪರಿಚಿತರನ್ನು ಸ್ನೇಹಿತರನ್ನಾಗಿಸಿಕೊಂಡು ಅನೇಕ ಮಂದಿ ಮೋಸ ಹೋಗುತ್ತಿದ್ದಾರೆ. ಈ ರೀತಿ ಮೋಸ ಮಾಡಲೆಂದೇ ಫೇಕ್ ಅಕೌಂಟ್ ನಕಲಿ ಪೋಟೋ ಗಳನ್ನು ಬಳಸಿ ಸ್ನೇಹದ ಬಲೆಗೆ ಬೀಳಿಸುವ ಸಂಚು ರೂಪಿಸುತ್ತಿರುತ್ತಾರೆ. ಹಾಗಾಗಿ ನಮಗೆ ಪರಿಚಿತರಲ್ಲಿದವರ ಸ್ನೇಹ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂ ಇರಬೇಕಾಗಿದೆ. ಇಲ್ಲದೇ ಹೋದರೆ ದೊಡ್ಡ ಮಟ್ಟದಲ್ಲಿ ಮೋಸ ಹೋಗುವ ಸಂಭವವಿರುತ್ತದೆ