ಆಸ್ತಿಗಾಗಿ ಸ್ವಂತ ಅಣ್ಣನನ್ನೇ ಸಹೋದರಿಯರು ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ನಡೆದಿದೆ. ರಾಘವೇಂದ್ರ (40) ಮೃತ ದುರ್ದೈವಿಯಾಗಿದ್ದು, ಆಸ್ತಿಗಾಗಿ ಕುಟುಂಬಸ್ಥರ ಜೊತೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು, ಬಾವನ ಜೊತೆಗೂಡಿ ಮೂವರು ಸಹೋದರಿಯರು ಕಣ್ಣಿಗೆ ಖಾರದ ಪುಡಿ ಎರಚಿ ಮಲಗಿದ್ದಲ್ಲೇ ಮನಸ್ಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ.
ರಾಘವೇಂದ್ರ ಮಂಚದ ಮೇಲೆ ಗಾಢ ನಿದ್ರೆಯಲ್ಲಿದ್ದರು. ಬೆಳಗಿನ ಜಾವ ಎಚ್ಚರವಾಗಿ ರಾಘವೇಂದ್ರ ಎದ್ದೊಡನೆ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಆತ ಏನಾಯಿತು ಎಂದು ಯೋಚಿಸುವ ಮುನ್ನವೇ ಸಿಕ್ಕ ಸಿಕ್ಕ ಕಡೆಗಳಲ್ಲಿ ಚಾಕುವಿನಿಂದ ಕೊಚ್ಚಿ ಹಾಕಿದ್ದಾರೆ. ಇವರ ರಾಕ್ಷಸಿ ಕೌರ್ಯಕ್ಕೆ ರಾಘವೇಂದ್ರ ಚಿರಾಡುತ್ತಾ, ಪ್ರಾಣ ಉಳಿಸಿಕೊಳ್ಳಲು ಆಗದೆ ಕ್ಷಣ ಮಾತ್ರದಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ.
ಆಸ್ತಿಗಾಗಿ ಕುಟುಂಬಸ್ಥರ ಜತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ಆಸ್ತಿ ಕೈ ತಪ್ಪಬಾರದೆಂದು ಯೋಜಿಸಿದ ಮೂವರು ಸಹೋದರಿಯರು ಬಾವನ ಜತೆಗೂಡಿ ಸಹೋದರ ರಾಘವೇಂದ್ರನನ್ನು ಮಲಗಿದ್ದಲ್ಲೇ ಮನಸ್ಸೋ ಇಚ್ಛೆ ಹೊಡೆದು ಕೊಂದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಆಸ್ತಿಗಾಗಿ ಅಮಾನುಷವಾಗಿ ಅಣ್ಣನನ್ನೇ ಕೊಂದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.