ಕನ್ನಡ ಭಾಷೆಯನ್ನು ನಿತ್ಯ ಜೀವನದಲ್ಲಿ ಬಳಸಿಕೊಂಡು ನೆಲ,ಜಲ ಉಳಿಸುವ ಕಾರ್ಯವಾಗಬೇಕು. ಕನ್ನಡ ಭಾಷೆಯ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಹಕಾರ ಅಗ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ಬಾಳೂರು ಹೋಬಳಿ ಅಧ್ಯಕ್ಷ ಮರ್ಕಲ್ ಸೋಮೇಶ್ ಹೇಳಿದರು.
ಸೋಮವಾರದಂದು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಗ್ರಹಣ ಕಾರ್ಯಕ್ರಮ ನಿಡುವಾಳೆಯ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿ ಕನ್ನಡಿಗರು ಮನೆಯಲ್ಲಿ ಭಾಷೆ ಬಳಕೆಯಿಂದ ಕನ್ನಡ ಭಾಷೆ ಉಳಿಸಲು ಸಾಧ್ಯ’ಎಂದರು.
ಕ.ಸಾ.ಪ. ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಭಾಷೆಯನ್ನು ಉಳಿಸಬಹುದು, ಭಾಷೆಯನ್ನು ಬಳಸದೇ ಹೋದರೆ ಅದು ಸೊರಗಿ ಕ್ರಮೇಣ ಜನಮಾನಸದಿಂದ ಕಣ್ಮರೆಯಾಗುತ್ತದೆ ಎಂದರು.
ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ’ ಮಲೆನಾಡಿನ ಜನರು ಬರೀ ಕನ್ನಡ ಭಾಷೆಗೆ ಹೋರಾಡುವುದಲ್ಲದೇ ಕಸ್ತೂರಿರಂಗನ್ ವರದಿಯಿಂದ ನಮ್ಮ ಜೀವನಕ್ಕೆ ಆಧಾರವಾದ ನೆಲಕ್ಕೂ ಹೋರಾಡುವ ಪರಿಸ್ಥಿತಿ ಬಂದಿದೆ.ನೆಲ, ಜಲ ಉಳಿಸುವ ದೃಷ್ಟಿಯಿಂದ ಕನ್ನಡಿಗರು ಹೋರಾಟದ ಮೂಲಕ ಕೈಜೋಡಿಸಬೇಕು’ಎಂದರು.
ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ ‘ ಕನ್ನಡ ಸಾಹಿತ್ಯದ ವಿಷಯವಾಗಿ ಮಹಿಳೆಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.ಕನ್ನಡ ಸೊಗಸಾದ ಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ’ಎಂದರು.
ಕಾಫಿ ಬೆಳೆಗಾರ ಕೆ.ಸಿ.ಮಹೇಂದ್ರ ಮಾತನಾಡಿ ನಮ್ಮ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಪ್ರೀತಿ ಆಸಕ್ತಿ ಬೆಳೆಸದೇ ಇದ್ದರೆ ಮುಂದಿನ ಪೀಳಿಗೆಯಲ್ಲಿ ಕನ್ನಡ ಕಣ್ಮರೆಯಾಗುತ್ತದೆ. ನಾವು ಶೋಕಿಗಾಗಿ ಇಂಗ್ಲೀಷ್ ಬಳಸದೇ ನಮ್ಮ ನಿತ್ಯದ ಜೀವನದಲ್ಲಿ ಕನ್ನಡವನ್ನೇ ಬಳಸುವ ಮೂಲಕ ನಮ್ಮ ಭಾಷೆಗೆ ನಿಜವಾದ ಗೌರವ ನೀಡಬೇಕು ಎಂದರು.
ಜೆಸಿಐ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್ ಶೆಟ್ಟಿ ಮಾತನಾಡಿ’ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು.ಕುವೆಂಪು ಕನ್ನಡ ಶಾಲೆಯಲ್ಲಿ ಓದಿದವರು.ಕವಿಗಳು ತಾಯಿ ಭಾಷೆಯನ್ನು ಬಳಸಿದವರು.ಹತ್ತಾರು ದೇವರುಗಳನ್ನು ಪೂಜಿಸುವುದಕ್ಕಿಂತ ತಾಯಿಯನ್ನು ಪ್ರೀತಿಸು.ಕನ್ನಡವನ್ನು ಉಳಿಸುವ ಕಾರ್ಯ ಕಸಾಪ ನಿರಂತರ ಮಾಡುತ್ತದೆ.ಹರಿಶಿಣ ಕುಂಕುಮಕ್ಕೆ ಪ್ರಮುಖ ಮಹತ್ವವಿದೆ. ಆಚಾರ ವಿಚಾರ ಸಂಸ್ಕೃತಿಯನ್ನು ನಾವು ಉಳಿಸುವ ಕಾರ್ಯ ಆಗಬೇಕಿದೆ’ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಕಟ ಪೂರ್ವ ಅಧ್ಯಕ್ಷ ರವಿ ಪಟೇಲ್ ಕೂವೆ ಮಾತನಾಡಿ ‘ನೆಲಜಲಕ್ಕೆ ಏನೇ ಸಂಕಷ್ಟ ಬಂದರೂ ಹೋರಾಡಲು ನಾವೆಲ್ಲರೂ ಕಟೀಬದ್ಧವಾಗಿ ನಿಲ್ಲೋಣ.ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ರವಿ ಪಟೇಲ್ ಕೂವೆ ಅವರು ನೂತನ ಅಧ್ಯಕ್ಷ ಎಂ.ವಿ. ಸೋಮೇಶ್ ಮರ್ಕಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಶಿಕ್ಷಕ ದಿನೇಶ್, ಹಿರಿಯರಾದ ನರಸಿಂಹ ಹೆಬ್ಬಾರ್ ಹಾಗೂ ಕಸಾಪ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ಪ್ರಕಾಶ್ ಬಕ್ಕಿ, ಸುಚಿತ್ರ ಪ್ರಸನ್ನ, ಹೋಬಳಿ ಕೋಶಾಧಿಕಾರಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಡಿ.ಟಿ.ಉಮೇಶ್, ಎಂ.ಆರ್.ಸುಧೀರ್, ಬಿ. ಎಂ.ಸತೀಶ್, ರವಿ ಬಕ್ಕಿ, ಶಿಕ್ಷಕ ಕಾಂತರಾಜ್ ಮುಂತಾದವರು ಇದ್ದರು.
ಶಿಕ್ಷಕ ಶಂಕರ್ ಜೆ ಕಾರ್ಯಕ್ರಮ ನಿರೂಪಿಸಿದರು.ಎಂ.ಆರ್.ಸುಧೀರ್ ವಂದಿಸಿದರು. ಪ್ರದೀಪ್ ಮರ್ಕಲ್ ಪ್ರಾರ್ಥನೆ ನೆರವೇರಿಸಿದರು.