ಮೂಡಿಗೆರೆ ತಾಲೂಕಿನ ಗೋಣಿಬೀಡು, ಜನ್ನಾಪುರ ಭಾಗದಲ್ಲಿ ಕಳೆದ ಏಳೆಂಟು ತಿಂಗಳಿನಿಂದ ನಿರಂತರ ವಿದ್ಯುತ್ ಸಮಸ್ಯೆ ಇದ್ದು, ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಜನ್ನಾಪುರ ಮೆಸ್ಕಾಂ ಉಪಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಆಗಸ್ಟ್ 16 ರಂದು ಶುಕ್ರವಾರ ಈ ಭಾಗದ ನೂರಾರು ಸಂಖ್ಯೆಯ ಸಾರ್ವಜನಿಕರು ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಕಳೆದ ಅನೇಕ ತಿಂಗಳಿಂದ ನಿರಂತರವಾಗಿ ವಿದ್ಯುತ್ ನಿಲುಗಡೆ ಆಗುತ್ತಿದೆ. ಹಗಲು ರಾತ್ರಿಯೆನ್ನದೇ ದಿನದಲ್ಲಿ ಎಂಟತ್ತು ಬಾರಿ ವಿದ್ಯುತ್ ನಿಲುಗಡೆಯಾಗುತ್ತದೆ. ಮಳೆಗಾಲ, ಬೇಸಿಗೆ, ಚಳಿಗಾಲ ಎಂಬ ವ್ಯತ್ಯಾಸವಿಲ್ಲದೇ ಎಲ್ಲಾ ಕಾಲಗಳಲ್ಲಿಯೂ ವಿದ್ಯುತ್ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಮೆಸ್ಕಾಂ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.
ಗೋಣಿಬೀಡು ಹೋಬಳಿ ಕೇಂದ್ರವಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಮ್ಮದಿ ಕೇಂದ್ರ, ನಾಡ ಕಛೇರಿ, ಅಂಚೆ ಕಛೇರಿ, ಪೊಲೀಸ್ ಠಾಣೆ, ಬ್ಯಾಂಕ್, ಸಹಕಾರ ಸಂಘ ಹೀಗೆ ಸಾರ್ವಜನಿಕರ ಸೇವೆ ತುಂಬಾ ತೊಂದರೆ ಉಂಟಾಗಿದೆ. ಮನೆಗಳಲ್ಲಿಯೂ ಸಹ ನಿರಂತರ ವಿದ್ಯುತ್ ನಿಲುಗಡೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಗೋಣಿಬೀಡು, ಜನ್ನಾಪುರ ಸುತ್ತಮುತ್ತಲ ಪ್ರದೇಶಗಳ ಜನರಿಗೆ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.