ರಾಷ್ಟ್ರಧ್ವಜ ಎಂಬುವುದು ಅಖಂಡ ದೇಶದ ಸಂಕೇತವಾಗಿದೆ. ಎಲ್ಲರೂ ಹೆಮ್ಮೆಯಿಂದ ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸಬೇಕು ಮತ್ತು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಬುಧವಾರ ಮೂಡಿಗೆರೆ ಪಟ್ಟಣದಲ್ಲಿ 100 ಮೀಟರ್ ಉದ್ದದ ರಾಷ್ಟ್ರ ಧ್ವಜ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮದು ಪ್ರಜಾಪ್ರಭುತ್ವ ದೇಶವಾಗಿದ್ದು, ಸಾಂಸ್ಕøತಿಕ, ಆಧ್ಯಾತ್ಮಿಕ, ನೈಸರ್ಗಿಕ ಹಾಗೂ ಸಂಪತ್ಬರಿತ ದೇಶವಾಗಿದೆ. ನಮ್ಮ ಇದಕ್ಕೆ ಸ್ವಾತಂತ್ರ್ಯ ತರಲು ಲಕ್ಷ್ಷಾಂತರ ಹೋರಾಟಗಾರರು ಜೀವ ಬಲಿದಾನ ಮಾಡಿದ್ದಾರೆ. ಅವರನ್ನು ಸದಾ ಸ್ಮರಿಸುವ ಜತೆಗೆ ದೇಶದ ಎಲ್ಲಾ ಭಾರತೀಯರು ರಾಷ್ಟ್ರ ಭಕ್ತಿ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮಾತನಾಡಿ, ಇಂದಿನ ಯುವ ಜನಾಂಗ ದೇಶದ ಬಗ್ಗೆ ಚಿಂತನೆ ಮಾಡುವಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲಾ ಮಹನೀಯರ ಹೆಸರು ತ್ಯಾಗ ಬಲಿದಾನವನ್ನು ಮೆಲುಕು ಹಾಕುವ ಮೂಲಕ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿತ್ವವನ್ನು ತಿರುಚುವ ಮತ್ತು ಅಸಹ್ಯಗೊಳಿಸುವ ಕೆಲಸವಾಗುತ್ತಿದೆ. ಬ್ರಿಟೀಷರ ಜತೆ ಶಾಮೀಲಾದವರನ್ನು ಸ್ವಾತಂತ್ರ್ಯ ಹೋರಾಟಗಾರರೆನ್ನುತ್ತಿರುವುದು ದುರಂತ. ಭವ್ಯ ಭಾರತ ಕಟ್ಟಲು ಎಲ್ಲರು ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.