ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ಕೆರೆಗೆ ಬಿದ್ದ ಚಪ್ಪಲಿ ತೆಗೆಯಲು ಹೋಗಿ ಅಪ್ರಾಪ್ತ ಸೇರಿ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಸಂಜೆ ನಡೆದಿದೆ.
ಶ್ರೀಕಾಂತ್ (15) ಹಾಗೂ ವಿಜಯ್ (18) ಮೃತ ದುರ್ದೈವಿಗಳು. ಕೆರೆಗೆ ಮೀನು ಹಿಡಿಯಲು ತೆರಳಿದ್ದ ವೇಳೆ ದಿಢೀರ್ ಮಳೆ ಬಂದಿದೆ. ತಕ್ಷಣ ರಕ್ಷಣೆ ಪಡೆಯಲು ಕೆರೆಯ ಪಕ್ಕದಲ್ಲಿದ್ದ ಮರದ ಕೆಳಗೆ ಇಬ್ಬರು ನಿಂತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಒಂದು ಕಾಲಿನ ಚಪ್ಪಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದು, ಶ್ರೀಕಾಂತ್ ಚಪ್ಪಲಿ ತೆಗೆದುಕೊಳ್ಳಲು ನೀರಿಗೆ ಇಳಿದಿದ್ದಾನೆ. ಕೆರೆಯಲ್ಲಿ ಹೂಳು, ಗಿಡ, ಗಂಟೆಗಳು ಬೆಳೆದಿದ್ದರಿಂದ ಕೆರೆಯ ನೀರಲ್ಲಿ ಶ್ರೀಕಾಂತ್ ಸಿಲುಕಿ ಒದ್ದಾಡಿದ್ದಾನೆ. ಕೂಡಲೇ ಶ್ರೀಕಾಂತ್ ರಕ್ಷಣೆಗೆ ವಿಜಯ್ ತೆರಳಿದ್ದು, ಈಜು ಬಾರದಿದ್ದರಿಂದ ಮೇಲೆ ಬರಲಾಗದೇ ಕೆರೆಯಲ್ಲಿ ಮುಳುಗಿ ಇಬ್ಬರು ಅಸುನೀಗಿದ್ದಾರೆ. ಮುಳುಗು ತಜ್ಞರು ಸ್ಥಳಕ್ಕಾಗಮಿಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನು ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.