ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರ ಸ್ನೇಹಿಯಾಗಿದ್ದು, ಜಿಲ್ಲೆಯ ಎಲ್ಲಾ ಕಲಾವಿದರು ಮುಕ್ತವಾಗಿ ನಮ್ಮನ್ನು ಸಂಪರ್ಕಿಸಿ ಇಲಾಖೆಯ ಯೋಜನೆಗಳು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸಿ. ರಮೇಶ್ ಹೇಳಿದರು.
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಸಂಘ, ಸಂಸ್ಥೆ, ಟ್ರಸ್ಟ್ ಗಳ ಪದಾಧಿಕಾರಿಗಳು ಹಾಗೂ ಕಲಾವಿದರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಲಾವಿದರು ಯಾವುದೇ ರೀತಿಯ ಸಮಸ್ಯೆಗಳಿದ್ದರು ತಾವುಗಳು ನಮ್ಮ ಗಮನಕ್ಕೆ ನೇರವಾಗಿ ತಂದಲ್ಲಿ ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಲಾವಿದರ ಸಬಲೀಕರಣವೇ ಇಲಾಖೆಯ ಮೂಲ ಉದ್ದೇಶ. ನಮ್ಮ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಸಮಾಜಕ್ಕೆ ಪರಿಚಯಿಸುವ ರಾಯಬಾರಿಗಳಾದ ತಾವುಗಳು ನಿಮ್ಮ ಕಲೆಯನ್ನು ಹೊಸಪೀಳಿಗೆಯ ಯುವಜನಾಂಗಕ್ಕೆ ಕಲಿಸುವ ಮೂಲಕ ನಮ್ಮ ಮಣ್ಣಿನ ಕಲೆಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ತಮ್ಮದಾಗಿರುತ್ತದೆ ಎಂದರು.
ಇಲಾಖೆಯ ಹಿರಿಯ ಎಲೆಕ್ಟ್ರೀಶಿಯನ್ ಬಿ.ಎನ್. ಶ್ರೀನಿವಾಸ್ ಮಾತನಾಡಿ, ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಧನಸಹಾಯ ಯೋಜನೆಯ ನಿಯಮಾವಳಿಗಳು ಹಾಗೂ ಸೇವಾಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ನಲ್ಲಿ ಅರ್ಜಿಸಲ್ಲಿಸುವ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುಗಮ ಸಂಗೀತಗಂಗಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಮತ್, ಗೆಳೆಯರ ಬಳಗರಂಗ ತಂಡದ ಅಧ್ಯಕ್ಷ ಎ.ಸಿ. ಚಂದ್ರಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶ್ರೀಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೆ.ಎಮ್. ಅಣ್ಣಪ್ಪ, ನಾದಚೈತನ್ಯ ಸಂಸ್ಥೆಯ ಶ್ರೀಮತಿ ರೇಖಾಪ್ರೇಮ್ ಕುಮಾರ್, ರೂಪನಾಯಕ್, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹಾಗೂ ಗ್ರಾಮೀಣ ಭಾಗಗಳ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಲಾವಿದರು, ಕಲಾತಂಡದ ಮುಖ್ಯಸ್ಥರುಗಳು, ಭಾಗವಹಿಸಿದ್ದರು.