ಅರಣ್ಯ ಭೂಮಿ ಒತ್ತುವರಿ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದರೂ ತೆರವಾಗಿರದ ಒತ್ತುವರಿಗಳನ್ನು ಮಾತ್ರ ತೆರವುಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಬಗ್ಗೆ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.
ವಿಧಾನ ಸೌದದಲ್ಲಿ ತಮ್ಮನ್ನು ಭೇಟಿಯಾದ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದ ಜನಪ್ರತಿನಿಧಿಗಳ ಮತ್ತು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರತಿನಿಧಿಗಳ ನಿಯೋಗಕ್ಕೆ ಸಚಿವರು ಈ ಭರವಸೆ ನೀಡಿದ್ದಾರೆ.
ಒತ್ತುವರಿ ತೆರವುಗೊಳಿಸುವ ಕುರಿತು ಈಗಾಗಲೇ ಸ್ಪಷ್ಟವಾಗಿ ಆದೇಶ ಕೊಟ್ಟಿದ್ದೇನೆ. ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿ ಇತ್ಯಾರ್ಥವಾಗಿದ್ದರೂ ತೆರವಾಗದೆ ಇರುವ ಬಗ್ಗೆ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ನೀಡುತ್ತಿದೆ ಎಂದರು.
ಇಂತಹ ಒತ್ತುವರಿಗಳನ್ನು ಹಾಗೂ 2015 ರ ನಂತರ ಅತಿಕ್ರಮಣವಾಗಿರುವುದನ್ನು ಮಾತ್ರ ತೆರವಿಗೆ ಸೂಚನೆ ನೀಡಲಾಗಿದೆ. ಉಳಿದಂತೆ 3 ಎಕರೆ ಒಳಗಿನ ಒತ್ತುವರಿ ಹಾಗೂ ಇತರೆ ಅರ್ಜಿಗಳು ವಿಲೇವಾರಿ ಆಗದೆ ಇರುವ ಒತ್ತುವರಿಗಳನ್ನು ಮುಟ್ಟ ಬಾರದು ಎಂದು ಸೂಚಿಸಿದ್ದೇನೆ ಎಂದು ಸಚಿವರು ನಿಯೋಗಕ್ಕೆ ತಿಳಿಸಿದ್ದಾರೆ.
ಒತ್ತುವರಿ ತೆರವುಗೊಳಿಸುವಂತೆ ಸಚಿವರು ನೀಡಿದ ಸೂಚನೆಗಳಿಂದಾಗಿ ಮಲೆನಾಡಿಗರಲ್ಲಿ ಆತಂಕವಿದ್ದು ಸಣ್ಣ ಹಾಗೂ ಅತೀ ಸಣ್ಣ ರೈತರು ಹಾಗೂ ಮನೆಗಳನ್ನು ಕಟ್ಟಿಕೊಂಡವರೆಲ್ಲ ಭಯ ಭೀತರಾಗಿದ್ದಾರೆ ಎಂದು ನಿಯೋಗ ತಿಳಿಸಿದೆ.
ಇಲಾಖೆಯ ಈ ನಿಲುವಿನಿಂದಾಗಿ ಹಳ್ಳಿಗಳಲ್ಲಿ ಸಣ್ಣ ಪುಟ್ಟ ರೈತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ನಿಮ್ಮ ಸ್ಪಷ್ಟವಾದ ನಿಲುವನ್ನು ತಿಳಿಸಬೇಕು ಎಂದು ನಿಯೋಗವು ಮನವಿ ಮಾಡಿತ್ತು.
ನ್ಯಾಯಾಲಯದಲ್ಲಿ ಇತ್ಯರ್ಥ ವಾಗಿರುವ ಕೃಷಿ ಭೂಮಿಯನ್ನು ಮುಂದಿನ ಫಸಲು ಕುಯ್ಯುವವವರೆಗೆ ತೆರವು ಮಾಡಬಾರದು ಎಂದು ಮನವಿ ಮಾಡಿತ್ತು.
ಯಾವುದರ ತೆರವು ಹಾಗೂ ಯಾವುದನ್ನು ತೆರವು ಮಾಡಬಾರದು ಮತ್ತು ಏತಕ್ಕಾಗಿ ಒತ್ತುವರಿ ತೆರವು ಮಾಡುತ್ತಿದ್ದೇವೆ ಎಂಬ ಸ್ಪಷ್ಟ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪುವಂತೆ ವ್ಯವಸ್ಥೆ ಮಾಡುತ್ತೇನೆ ಎಂಬ ಆಶ್ವಾಸನೆಯನ್ನೂ ನಿಯೋಗಕ್ಕೆ ನೀಡಿದರು.
ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಲ್ಲಿ, ಫಸಲನ್ನುಪಡೆಯಲು ಅವಕಾಶ ಮಾಡಿಕೊಡಲು, ಸದ್ಯ ಜಾಗದ ಗಡಿ ಗುರುತಿಸಿ ಈಗ ಬಂದಿರುವ ಫಸಲನ್ನು ರೈತರು ಕೊಯ್ಲು ಮಾಡುವವರೆಗೂ ಕಾದು, ನಂತರ ಒತ್ತವರಿ ತೆರವು ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಸಚಿವ ಈಶ್ವರ್ ಖಂಡ್ರೆ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಪಾರಂಪರಿಕ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಲು ವಿಧಾನಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿರುವುದಕ್ಕೆ ಈ ನಿಯೋಗವು ಸಚಿವರಿಗೆ ಕೃತಜ್ಞತೆ ಸಲ್ಲಿಸಿತು. ಈ ವಿಚಾರವಾಗಿ ಕೇಂದ್ರದ ಮೇಲೆ ಸರ್ಕಾರವು ಒತ್ತಡ ಹೇರಲು ನಿಯೋಗ ಕರೆದುಕೊಂಡು ಹೋಗುವಂತೆ ಮನವಿ ಮಾಡಿತು.
ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದ ಈ ನಿಯೋಗದಲ್ಲಿ ಶೃಂಗೇರಿಯ ಶಾಸಕ ಟಿ.ಡಿ.ರಾಜೇಗೌಡ, ತರಿಕೆರೆ ಶಾಸಕ ಶ್ರೀನಿವಾಸ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಪರಿಷತ್ ಸದಸ್ಯ ಗೋಪಾಲ ಸ್ವಾಮಿ, ಗುಂಡ್ಲು ಪೇಟೆ ಶಾಸಕ ಗಣೇಶ್ ಹಾಗೂ ಮಲೆನಾಡು ಜನಪರ ಒಕ್ಕೂಟದ ಅನಿಲ್ ಹೊಸಕೊಪ್ಪ, ಸುಕೇಶ್ ದಾಸನಕೋಡಿಗೆ ಇದ್ದರು.