ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್, ಚಿಕ್ಕಮಗಳೂರು ಷೇರುದಾರರಿಗೆ ಶೇ.12% ಡಿವಿಡೆಂಟ್ ನೀಡಲಿದೆ ಎಂದು ಅಧ್ಯಕ್ಷೆ ಬಿ.ಸಿ.ಗೀತಾ ಘೋಷಿಸಿದರು.
ಚಿಕ್ಕಮಗಳೂರು ಕೇಂದ್ರವಾಗಿರಿಸಿಕೊಂಡಿರುವ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ 25ನೆಯ ವಾರ್ಷಿಕ ಮಹಾಸಭೆಯು ನಗರದ ರಂಗಣ್ಣನವರ ಛತ್ರದಲ್ಲಿ ಬ್ಯಾಂಕಿನ ಅಧ್ಯಕ್ಷೆ ಬಿ.ಸಿ.ಗೀತಾ ಅಧ್ಯಕ್ಷತೆಯಲ್ಲಿ ನಡೆಯಿತು.
24ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬ್ಯಾಂಕ್ ಉತ್ತಮ ವ್ಯವಹಾರ ನಡೆಸುತ್ತಿದ್ದು ಅಂದಿನಿಂದಲೂ ಪ್ರತಿವರ್ಷವೂ ಲಾಭದಾಯಕವಾಗಿ ಮುನ್ನಡೆದಿದೆ. ಆರ್ ಬಿ ಐ ನಿರ್ದೇಶನಗಳನ್ನೆಲ್ಲ ಪಾಲಿಸುತ್ತಾ ಎಫ್ಎಸ್ಡಬ್ಲೂಎಂ ಹಿರಿಮೆಗೆ ಪಾತ್ರವಾಗಿದೆ ಎಂದ ಗೀತಾ, ಪ್ರಸಕ್ತ ಸಾಲಿನಲ್ಲಿ 642.07 ಲಕ್ಷ ರೂ. ಲಾಭ ಇದ್ದು ಆದಾಯ ತೆರಿಗೆ ಪಾವತಿ ನಂತರ ರೂ.306.22ಲಕ್ಷ ನಿವ್ವಳ ಲಾಭ ಗಳಿಸಿದೆ. ಇಂದಿನ ಮಹಾಸಭೆಯ ಸಮ್ಮತಿಯ ಮೆರೆಗೆ ಷೇರುದಾರರಿಗೆ ಶೇ.12 ಲಾಭಾಂಶವನ್ನು ಘೋಷಿಸುತ್ತಿರುವುದಾಗ ನುಡಿದರು.
ಬ್ಯಾಂಕಿನಲ್ಲಿ ಒಟ್ಟು 311 ಕೋಟಿ ರೂ. ಬಂಡವಾಳವಿದ್ದು, 280ಕೋಟಿಗಳ ಠೇವಣಿ ಸಂಗ್ರಹಿಸಲಾಗಿದೆ. 190ಕೋಟಿ ಸಾಲ ಹೊರಬಾಕಿ ಇರುತ್ತದೆ. ಈ ಸಾಲಿನಲ್ಲಿ ಸಾಲದ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಬ್ಯಾಂಕಿನ ನಿವ್ವಳ ಎನ್ಪಿಎ ಆಗಿದೆ ಎಂದರು.
ಈ ಸಾಲಿನಲ್ಲಿ 456 ಕೋಟಿಗಳ ವ್ಯವಹಾರ ನಡೆಸಿದ್ದು, ಬ್ಯಾಂಕಿನ ಒಟ್ಟು ವಹಿವಾಟು 1513 ಕೋಟಿಗಳಾಗಿದೆ. ಈಗಾಗಲೇ ಕಡೂರು ಮತ್ತು ಶಿವಮೊಗ್ಗದಲ್ಲಿ ಮಹಿಳಾ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ರಜತ ಮಹೋತ್ಸವದ ಮುಂದಿನ ವರ್ಷದೊಳಗಾಗಿ ವ್ಯವಹಾರದ ಇನ್ನಷ್ಟು ಅಭಿವೃದ್ಧಿಗಾಗಿ ಹಾಸನ ಜಿಲ್ಲೆಯಲ್ಲಿ ಶಾಖೆ ತೆರೆಯಲು ಯೋಜಿಸಲಾಗಿದೆ. ಚಿಕ್ಕಮಗಳೂರಿನ ಪ್ರಧಾನ ಕಚೇರಿಯ ಕಟ್ಟಡದಲ್ಲಿ ಮೇಲಂತಸ್ತಿನ ಕಟ್ಟಡ ನಿರ್ಮಾಣದ ಬಗ್ಗೆ ಕ್ರಮ ಕೈಗೊಂಡಿರುವುದಾಗಿ ನುಡಿದರು.
ಬ್ಯಾಂಕಿನಲ್ಲಿ ಎಲ್ಲಾ ಆಧುನಿಕ ರೀತಿಯಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದು, ಮುಖ್ಯವಾಗಿ ಯು.ಪಿ.ಐ ಸೇವೆಗಳನ್ನು ಗ್ರಾಹಕರು ಬಹಳ ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆಂದ ಗೀತಾ ಬ್ಯಾಂಕಿನ ದೈನಂದಿನ ವ್ಯವಹಾರ ನಾಲ್ಕರಿಂದ ಐದು ಪಟ್ಟು ಜಾಸ್ತಿಯಾಗಿದೆ. ಇದಕ್ಕೆ ಗ್ರಾಹಕರು, ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ಸ್ಮರಣೀಯ ಎಂದರು.
ಬ್ಯಾಂಕಿನ ವೃತ್ತಿಪರ ನಿರ್ದೇಶಕಿ ಎಚ್.ಎನ್.ಅರುಂಧತಿ ಸ್ವಾಗತಿಸಿ, ನಿರ್ದೇಶಕಿ ಆಶಾ ಹೇಮಂತ್ಕುಮಾರ್ ವಂದಿಸಿದರು.
ಉಪಾಧ್ಯಕ್ಷೆ ಸುಧಾರಾಜು, ನಿರ್ದೇಶಕರುಗಳಾದ ಸುಜಾತಕೃಷ್ಣಮೂರ್ತಿ, ಸೌಭ್ಯಾಗ್ಯ ಗೋಪಾಲನ್, ಕಮಲಾಬಸವರಾಜ್, ಜಯಶ್ರೀನಂಜರಾಜ್, ಜಯಲಕ್ಷ್ಮೀರಾಮೇಗೌಡ, ತಾರಾ ಮೋಹನ್, ಕವಿತರಾಹುಲ್ನಾಯಕ್, ಅನುಪಮಾಎನ್ಎಲ್, ಮೀನಾ, ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ.ಆರ್.ಸತೀಶ್, ವ್ಯವಸ್ಥಾಪಕಿ ಕವಿತಾ, ಅಜಿತ್ಕುಮಾರ್ ಶ್ರೀರಾಮ್ ಮತ್ತಿತರರು ಪಾಲ್ಗೊಂಡಿದ್ದರು.