ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಶನಿವಾರ ಮುಂಜಾನೆ ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ಮಾರ್ಗ ಮಧ್ಯೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಶುಕ್ರವಾರ ರಾತ್ರಿ ಹೊರಟಿದ್ದ ಈ ಎರಡು ರೈಲುಗಳು ಹಾಸನ ಹಾಗೂ ಆಲೂರು ನಿಲ್ದಾಣದಲ್ಲಿ ಸ್ಥಗಿತವಾಗಿದೆ. ವೀಕೆಂಡ್ನಲ್ಲಿ ಊರಿಗೆ ಹೊರಟಿದ್ದ ಪ್ರಯಾಣಿಕರಿಗೆ ಇದರಿಂದ ತುಂಬಾ ತೊಂದರೆಯುಂಟಾಗಿದೆ.
ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ಬಂದ್ ಆಗಿದೆ. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದಾರೆ. ರೈಲ್ವೆ ವಲಯವು ಸದ್ಯದ ಮಟ್ಟಿಗೆ ಪಡೀಲ್-ಹಾಸನ ಜಂಕ್ಷನ್ ನಡುವಿನ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಿದೆ. ಈ ನಡುವೆ ಭೂಕುಸಿತವಾದ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮುಂದುವರೆದಿದ್ದು ಕೆಲವೇ ಹೊತ್ತಿನಲ್ಲಿ ರೈಲಿನ ಓಡಾಟ ಆರಂಭಗೊಳಿಸಲಾಗುವುದು ಎಂದು ಡಿಆರ್ಎಂ ಮೈಸೂರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಟ್ವೀಟ್ ಮಾಡಿದೆ.
ಬೆಂಗಳೂರು-ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮತ್ತು ಹಾಸನ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವೂ ಬಂದ್ ಮಾಡಲಾಗಿದೆ. ಆಲೂರು-ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಸಕಲೇಶಪುರ, ಯಡಕುಮಾರಿ, ಶಿರಿಬಾಗಿಲು, ಆಲೂರು ಸೇರಿ ಒಟ್ಟು ಆರು ಕಡೆ ರೈಲು ಸಂಚಾರ ನಿಂತಿದ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಡಿದರು. ಸಾವಿರಾರು ಪ್ರಯಾಣಿಕರು ಬೆಳಗಿನ ಜಾವದವರೆಗೆ ರೈಲಿನಲ್ಲೇ ಕಳೆದರು. ಬೆಳಗ್ಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಾಹನಗಳ ವ್ಯವಸ್ಥೆ ಮಾಡಿದೆ.