ಮೂಡಿಗೆರೆ ತಾಲ್ಲೂಕು ಹಳೆ ಮೂಡಿಗೆರೆ ಗ್ರಾ,ಪಂ. ಅಧ್ಯಕ್ಷರು ಹಾಗೂ ಪಿಡಿಒ ಗ್ರಾ.ಪಂ. ಸದಸ್ಯರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಸದಸ್ಯ ಜುಬೇರ್ ಆರೋಪಿಸಿದರು.
ಅವರು ಶನಿವಾರ ಹಳೆ ಮೂಡಿಗೆರೆ ಗ್ರಾ.ಪಂ. ಎದುರು ಸಮಾನತೆ ಬೇಕೆಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ನಡೆಸಿದ ಧರಣಿಯಲ್ಲಿ ಮಾತನಾಡಿದರು. ಹಳೆಮೂಡಿಗೆರೆ ಗ್ರಾ.ಪಂ. ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾವುದೇ ಸಭೆ ನಡೆಸಿದರೂ ಅರ್ಧಕ್ಕೆ ನಿಂತು ಹೋಗುವುದು ಬಿಟ್ಟರೆ ಪೂರ್ಣಗೊಳ್ಳುವುದೇ ಇಲ್ಲ. ಇದರಿಂದ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳಾದ ನಾವು ಜನರಿಗೆ ಉತ್ತರ ಕೊಡುವುದೇ ಕಷ್ಟವಾಗಿದೆ ಎಂದು ದೂರಿದರು.
ಈ ಬಾರಿ ಮಳೆಯಿಂದಾಗಿ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ಮನೆ ಕುಸಿತಗೊಂಡಿದೆ. ಪಂಚಾಯಿತಿ ಅನುದಾನ ಬಳಸಿ ಸಂತ್ರಸ್ತರಿಗೆ ಟಾರ್ಪಲ್ ಮತ್ತು ಆಹಾರದ ಕಿಟ್ ವಿತರಣೆ ಮಾಡಬೇಕೆಂದು ಕಳೆದ ಜು.25ಕ್ಕೆ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿ, ಆಹಾರದ ಕಿಟ್ ಮತ್ತು ಟಾರ್ಪಲನ್ನು ಎಲ್ಲಾ ಸದಸ್ಯರು ಒಗ್ಗೂಡಿಕೊಂಡು ವಿತರಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಅಧ್ಯಕ್ಷರು ಮತ್ತು ಪಿಡಿಒಗಳ ತಮ್ಮ ಗಮನಕ್ಕೆ ತರದೇ ಕುನ್ನಳ್ಳಿ ಭಾಗದ ನಿರಾಶ್ರಿತರಿಗೆ ಆಹಾರದ ಕಿಟ್ ಹಾಗೂ ಟಾರ್ಪಲ್ ವಿತರಿಸಿದ್ದು, ನಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿದೆ.
ಈ ಬಗ್ಗೆ ತಾ.ಪಂ. ಇಒ ಅವರು ಸ್ಥಳಕ್ಕೆ ಭೇಟಿ ನೀಡಿ ಉತ್ತರ ನೀಡಬೇಕೆಂದು ಆಗ್ರಹಿಸಿದರು. ಗ್ರಾ.ಪಂ. ಸದಸ್ಯರಾದ ಜ್ಯೋತಿ ಸಾಲ್ಡಾನ, ಜಾನಕಿ ಉಪಸ್ಥಿತರಿದ್ದರು.