ಹೇಮಾವತಿ ಉಪನದಿ ಬದಿಯಲ್ಲಿ ರಸ್ತೆ ಕುಸಿತದಿಂದ ಹತ್ತಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಿ ಕಾರಳ್ಳಿ ಗ್ರಾಮದ ಜನರು ರಸ್ತೆ ಕುಸಿತದಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಬಕ್ಕಿ ಗ್ರಾಮದ ಬಳಿ ಹೇಮಾವತಿ ಉಪನದಿ ಸೇತುವೆಯ ಬಳಿ ಹೊಳೆಯ ರಭಸಕ್ಕೆ ಪಕ್ಕದ ರಸ್ತೆ ಕುಸಿದಿದೆ. ಈ ರಸ್ತೆಯು ಬಕ್ಕಿ ಕಾರಳ್ಳಿಯ ಹತ್ತಾರು ಮನೆಗಳಿಗೆ ಸಂಪರ್ಕ ಕಲ್ಪಿಸುವುದಾಗಿದೆ. ಅಲ್ಲದೇ ಸುಮಾರು 30ಕ್ಕೂ ಅಧಿಕ ಕುಟುಂಬಗಳು ಈ ರಸ್ತೆಯನ್ನು ಕೃಷಿ ಚಟುವಟಿಕೆಗಳಿಗಾಗಿ ತಮ್ಮ ಜಮೀನುಗಳಿಗೆ ಹೋಗಿಬರಲು ಬಳಸುತ್ತಿವೆ.
ಕಳೆದ ಐದು ವರ್ಷಗಳಿಂದ ಈ ರಸ್ತೆ ಹೊಳೆಯ ಹೊಡೆತದಿಂದ ಹಂತಹಂತವಾಗಿ ಕುಸಿಯುತ್ತಾ ಬರುತ್ತಿದ್ದು, ಈ ವರ್ಷದ ಅತಿವೃಷ್ಟಿಗೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಸುಮಾರು 300 ಮೀಟರ್ ಉದ್ದಕ್ಕೆ ರಸ್ತೆ ಬಹುತೇಕ ಕುಸಿದಿದೆ. ವಾಹನ ಸಂಚಾರ ದುಸ್ತರವಾಗಿದೆ. ಜನರು ನಡೆದುಕೊಂಡು ಹೋಗಲು ಸಹ ಭಯಪಡುವ ಸ್ಥಿತಿಗೆ ತಲುಪಿದೆ.
ಈ ಬಗ್ಗೆ ಗ್ರಾಮಸ್ಥರು ಮತ್ತು ಜಮೀನಿನ ಮಾಲೀಕರು ತಮ್ಮ ಆತಂಕ ವ್ಯಕ್ತಪಡಿಸಿದ್ದು, ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಹೊಳೆಬದಿಗೆ ತಡೆಗೋಡೆ ನಿರ್ಮಾಣ ಮಾಡಿ ಮತ್ತು ರಸ್ತೆಯನ್ನು ಅಭಿವೃದ್ದಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿ ಕೋರಿದ್ದಾರೆ.
ಬಕ್ಕಿ ಕಾರಳ್ಳಿ ಗ್ರಾಮದಲ್ಲಿ ಜನರ ಓಡಾಟ ಮತ್ತು ಕೃಷಿ ಕಾರ್ಯಗಳಿಗೆ ಸಂಚರಿಸಲು ಇರುವ ಏಕೈಕ ಮಾರ್ಗ ಈಗ ಹೊಳೆಯ ಹೊಡೆತಕ್ಕೆ ಸಿಲುಕಿ ಕುಸಿಯತೊಡಗಿದೆ. ಈ ಬಗ್ಗೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು ಸಹ ಯಾವುದೇ ಪ್ರಯೋಜನ ಆಗಿಲ್ಲ. ದಯಮಾಡಿ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನಹರಿಸಿ ಅನುದಾನ ನೀಡಿ ತಡೆಗೋಡೆ ನಿರ್ಮಿಸಿಕೊಡಬೇಕೆಂದು ಕೋರುತ್ತೇವೆ.
ಹೆಚ್. ಎನ್. ಪ್ರಸಾದ್, ಸ್ಥಳೀಯ ಜಮೀನು ಮಾಲೀಕ