ತೋಟಕ್ಕೆ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಸಕಲೇಶಪುರ ತಾಲ್ಲೂಕಿನ, ಬಿರಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಗೌಡ (43) ಎಂಬವರು ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಸಕಲೇಶಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಬುಧವಾರ ಪತ್ನಿ ಜತೆಗೆ ಕಾಫಿ ತೋಟಕ್ಕೆ ತೆರಳುತ್ತಿದ್ದ ಕೃಷ್ಣಗೌಡರ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಇದರಿಂದ ಕೃಷ್ಣೆಗೌಡರು ತೀವ್ರವಾಗಿ ಗಾಯಗೊಂಡಿದ್ದಾರೆ. ಪತ್ನಿ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡ ಕೃಷ್ಣೇಗೌಡ ಅವರನ್ನು ಸುಮಾರು ಒಂದು ಕಿಲೋಮೀಟರ್ ವರೆಗೆ ಟ್ರಾಕ್ಟರ್ ಮೂಲಕ ತಂದು ನಂತರ ಜೀಪಿನಲ್ಲಿ ಸಕಲೇಶಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಈ ಭಾಗದಲ್ಲಿ ನಿರಂತರ ಕಾಡಾನೆ ದಾಳಿ ಮಾಡುತ್ತಿದ್ದು, ರೈತರು ತಮ್ಮ ಜಮೀನಿಗಳಿಗೆ ತೆರಳಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಅರೇಹಳ್ಳಿ ಸಮೀಪ ಕಾಡಾನೆಯೊಂದು ಕಾಫಿ ತೋಟದ ಮಾಲೀಕರನ್ನು ಅಟ್ಟಿಸಿಕೊಂಡು ಬಂದ ಸಂದರ್ಭದಲ್ಲಿ ಅವರು ತೋಟದ ಮನೆಯ ಮೇಲ್ಚಾವಣಿಯನ್ನು ಹತ್ತಿ ಜೀವ ಉಳಿಸಿಕೊಂಡಿದ್ದರು.