ಮಲೆನಾಡಿನಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮದುಗುಂಡಿ, ಕಳಸ, ಕೊಟ್ಟಿಗೆಹಾರ ಅಲೇಖಾನ್ ಹೊರಟ್ಟೆ ಭಾಗದಲ್ಲಿ ಪರಿಶಿಷ್ಟ ಪಂಗಡದ ಮಲೆಕುಡಿಯಾ ಸಮುದಾಯದವರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸರಕಾರ ಪೌಷ್ಠಿಕ ಆಹಾರ ವಿತರಣೆ ಮಾಡಬೇಕೆಂದು ಕರ್ನಾಟಕ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ಮಾಜಿ ಅಧ್ಯಕ್ಷ ಮುತ್ತಪ್ಪ ಒತ್ತಾಯಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಆದಿವಾಸಿಗಳ ಆರೋಗ್ಯ ದೃಷ್ಟಿಯಿಂದ ವರ್ಷಕ್ಕೆ ೬ ತಿಂಗಳು ಮಾತ್ರ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೆಕುಡಿಯಾ ಪರಿಶಿಷ್ಟ ಪಂಗಡ ಸೇರಿದಂತೆ ರಾಜ್ಯದ 11 ಬುಡಕಟ್ಟು ಸಮುದಾಯಗಳಿಗೆ 12 ತಿಂಗಳು ಪೌಷ್ಠಿಕ ಆಹಾರ ಯೋಜನೆ ವಿಸ್ತರಿಸಲು ಘೋಷಣೆ ಮಾಡಿದ್ದರು. ಅದರೆ ಈ ಯೋಜನೆ ಇದೂವರೆಗೂ ಜಾರಿಯಾಗಿಲ್ಲ. ಜಿಲ್ಲೆಯಲ್ಲಿ ಕೇವಲ 2 ಪರಿಶಿಷ್ಟ ಪಂಗಡದ ಹಸಲರು ಮತ್ತು ಗೌಡಲು ಸಮುದಾಯಕ್ಕೆ ಮಾತ್ರ ಪೌಷ್ಠಿಕ ಆಹಾರ ನೀಡುತ್ತಿದು, ಉಳಿದ ಅದಿವಾಸಿ ಜನಾಂಗದವರಾದ ಮಲೆಕುಡಿಯಾ, ಹಕ್ಕಿಪಿಕ್ಕಿ, ಮೇದ, ಡೊಂಗ್ರಿಗವಾಸಿಯ ಇನ್ನಿತರ ಪರಿಶಿಷ್ಟ ಪಂಗಡದ ಆದಿವಾಸಿಗಳು ಪೌಷ್ಠಿಕ ಆಹಾರ ಯೋಜನೆಯಿಂದ ವಂಚಿತರಾಗಿದ್ದಾರೆಂದು ದೂರಿದರು.
ಮಾಧ್ಯಮಗಳು ಮಲೆಕುಡಿಯ ಗ್ರಾಮದ ಕುಟುಂಬಗಳು ನೀರಿನಿಂದ ಬಂಧನಕ್ಕೊಳಗಾಗಿ ಆಹಾರಕ್ಕಾಗಿ ಪರಿತಪಿಸುವ ಬಗ್ಗೆ ವರದಿ ಮಾಡಿ ಜಿಲ್ಲಾಡಳಿತ ಗಮನ ಸೆಳೆದಿರುವುದು ಶ್ಲಾಘನೀಯ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಆ ಕುಟುಂಬಗಳಿಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡಿದೆ. ಆದರೆ ಅವರಿಗೆ ನಿಜವಾಗಿಯೂ ಸಿಗಬೇಕಾದ ಪೌಷ್ಠಿಕ ಆಹಾರ ಒದಗಿಸಬೇಕಿದೆ. ಗ್ರಾ.ಪಂ.ಯಲ್ಲಿ ನರೇಗಾ ಯೋಜನೆ ಕೆಲಸ ಸಿಗದೇ ದಿನನಿತ್ಯ ಆಹಾರಕ್ಕೆ ಪರದಾಡುವಂತಾಗಿದೆ. ಕಾಡಂಚಿನಲ್ಲಿ ವಾಸವಾಗಿರುವ ಆದಿವಾಸಿಗಳಿಗೆ ಪೌಷ್ಠಿಕ ಆಹಾರದ ಜತೆಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.