ವ್ಯಕ್ತಿ ಯಶಸ್ವಿಯಾಗಬೇಕೆಂದರೆ ಉನ್ನತವಾದ ಗುರಿಯೊಂದಿಗೆ ಸಾಧಿಸುವ ಛಲ, ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವನೆ ಮತ್ತು ನಿರಂತರ ಪ್ರಯತ್ನ ಬೇಕು ಎಂದು ಕ್ಯಾಪ್ಟನ್ ಗೋಪಿನಾಥ್ ಹೇಳಿದರು.
ಅವರು ಶುಕ್ರವಾರ ಚಿಕ್ಕಮಗಳೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಚಿಕ್ಕಮಗಳೂರು ಎಐಟಿ ಸರ್ಕಲ್ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂಡರ್ 13 ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ವ್ಯಕ್ತಿಯಲ್ಲಿ ಸಾಹಸ ಮನೋಭಾವನೆ ಇದ್ದರೆ ಮಾತ್ರ ಸಾಧನೆಯ ಶಿಖರದೆಡೆಗೆ ರೆಕ್ಕೆ ಬಿಚ್ಚಿ ಹಾರಲು ಸಾಧ್ಯ. ಕ್ರೀಡೆಯಲ್ಲಿ ಛಲವಿದ್ದಲ್ಲಿ ಚಾಂಪಿಯನ್ ಆಗಬಹುದು. ಒಬ್ಬೊಬ್ಬರಿಗೆ ಒಂದೊಂದು ಕಲೆ ಇದ್ದು ಅದನ್ನು ಸರಿಯಾದ ದಿಕ್ಕಿನಲ್ಲಿ ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ : ಚದುರಂಗ ನಮ್ಮ ಭಾರತೀಯ ಪ್ರಾಚೀನವಾದ ಕ್ರೀಡೆಯಾಗಿದೆ. ಇದು ಮೆದುಳಿಗೆ ಕಸರತ್ತು ನೀಡುತ್ತದೆ. ಮಕ್ಕಳು ಚದುರಂಗ ಆಟದಲ್ಲಿ ತೊಡಗಿಸಿಕೊಡುವುದರಿಂದ ಅವರ ಬುದ್ಧಿಮತ್ತೆ ಚುರುಕಾಗುತ್ತದೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ ರಾಜಶೇಖರ್ ಮಾತನಾಡಿ ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಗಳಿದ್ದಂತೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯ. ಚದುರಂಗ ಕ್ರೀಡೆಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಮುಖಂಡರಾದ ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ರುದ್ರೇಶ್ ಕಹಳೆ, ಎ.ಆರ್.ತೇಜಸ್ವಿ, ಮಂಜುಳಾ ಹುಲ್ಲಹಳ್ಳಿ, ತ್ಯಾಗರಾಜ್, ಮಂಜುನಾಥ್ ಜೈನ್ ಇದ್ದರು.
ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಅಧ್ಯಕ್ಷ ನಯನ ತಳವಾರ ಅಧ್ಯಕ್ಷತೆ ವಹಿಸಿದ್ದರು.
ಸುಚಿತ್ರ ಪ್ರಸನ್ನ ಪ್ರಾರ್ಥನೆ ನೆರವೇರಿಸದರು. ಅಮರನಾಥ್ ರೂಪಿಸಿದರು, ಪ್ರಸನ್ನ ಗೌಡಹಳ್ಳಿ ಸ್ವಾಗತಿಸಿದರು, ಗಿರೀಶ್ ಮಣ್ಣೀಕೆರೆ ವಂದಿಸಿದರು.
ಡಿಸ್ಟ್ರಿಕ್ಟ್ ಚೆಸ್ ಅಸೋಷಿಯೇಷನ್ ಪದಾಧಿಕಾರಿಗಳಾದ ಶಿವಕಾಶಿ, ಪ್ರಸನ್ನ ಕುಮಾರ್, ಪ್ರಸನ್ನ ತಳವಾರ, ಉಮಾಶಂಕರ್, ಮುರುಳಿ, ಪರೀಕ್ಷಿತ್ ಮುಂತಾದವರು ಇದ್ದರು.
ಪಂದ್ಯಾವಳಿಯಲ್ಲಿ ರಾಜ್ಯದ 300 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದು, ಮೂರುದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.