ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಪಾರ ನಷ್ಟ ಸಂಭವಿಸಿದ್ದು, ಅನೇಕ ಮಂದಿ ತಮ್ಮ ವಾಸದ ಮನೆಗಳನ್ನು ಕಳೆದುಕೊಂಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಪಟ್ಟಣದ ವಗರ್ ರಸ್ತೆಯಲ್ಲಿ ಮನೆಯೊಂದು ಮಳೆಯಿಂದ ಬಹುತೇಕ ಮೇಲ್ಚಾವಣಿ ಸಹಿತ ಕುಸಿದು ಬಿದ್ದಿದೆ.
ಆಲ್ದೂರು ವಗರ್ ರಸ್ತೆ ನಿವಾಸಿ ಪ್ರಮೀಳ ಎಂಬುವವರ ಮನೆ ಮಳೆಯಿಂದಾಗಿ ಬುಧವಾರ ಕುಸಿದು ಬಿದ್ದಿದೆ. ಇದರಿಂದಾಗಿ ಮನೆಯವರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಸೂಕ್ತ ಕ್ರಮ ಜರುಗಿಸಿ ಮನೆ ಹಾನಿಯಿಂದ ಆಗಿರುವ ನಷ್ಟಕ್ಕೆ ಪರಿಹಾರ ಒದಗಿಸಿಕೊಡಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.