ಕಾರ್ಗಿಲ್ ವಿಜಯ ದಿವಸದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ. ಹಾಗಾಗಿ ಈ ಬಾರಿ ಕಾರ್ಗಿಲ್ ವಿಜಯೋತ್ಸವವನ್ನು ಬಿಜೆಪಿ ಯುವ ಮೋರ್ಚದಿಂದ ಜು.25 ಹಾಗೂ 26ರಂದು ಜಿಲ್ಲೆಯಾದ್ಯಂತ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚದ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷ ಅವಿನಾಶ್ ಹೇಳಿದರು.
ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಕರ್ಗಿಲ್ ಯುದ್ಧದಲ್ಲಿ ಜಯ ಸಾಧಿಸಿ 25 ರ್ಷಗಳು ಆಗಿದ್ದು, ಇದರ ಅಂಗವಾಗಿ ದೇಶದಾದ್ಯಂತ ವಿಜಯೋತ್ಸವ ಆಚರಿಸಲಾಗುತ್ತಿದೆ.
ಜುಲೈ 25ರಂದು ಬೆಳಗ್ಗೆ 9 ಗಂಟೆಗೆ ಮೂಡಿಗೆರೆ ಪಟ್ಟಣದ ಅಮರ್ ಜವಾನ್ ಸ್ಮಾರಕದಿಂದ ವಿಜಯ ಜ್ಯೋತಿ ಯಾತ್ರೆ ರಥಕ್ಕೆ ಬಿಜೆಪಿ ಯುವ ಮೋರ್ಚದ ರಾಜ್ಯ ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳೆಕಾಯಿ ಚಾಲನೆ ನೀಡಲಿದ್ದಾರೆ. ಬಳಿಕ ರಥ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ನಂತರ ಆಲ್ದೂರು, ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರಕ್ಕೆ ಸಾಗಲಿದೆ ಎಂದರು.
ಮರುದಿನ ಜುಲೈ 26ರಂದು ಬೆಳಗ್ಗೆ 9 ಗಂಟೆಗೆ ಲಕ್ಕವಳ್ಳಿಯಿಂದ ಪ್ರಾರಂಭಿಸಿ ತರಿಕೆರೆ, ಬೀರೂರು, ಕಡೂರು, ಸಖರಾಯಪಟ್ಟಣ ನಂತರ ಚಿಕ್ಕಮಗಳೂರು ನಗರಕ್ಕೆ ತೆರಳಲಿದ್ದು, ಸಂಜೆ ಪಂಜಿನ ಮೆರವಣಿಗೆ ಮೂಲಕ ಆಜಾದ್ ಪಾರ್ಕಿಗೆ ಸಾಗಿ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದರು
ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವುದು ಭಾರತೀಯರ ಕರ್ತವ್ಯವಾಗಿದೆ. ಹಾಗಾಗಿ ಎಲ್ಲಾ ಪಕ್ಷ, ಸಂಘಟನೆಗಳು, ವಿದ್ಯಾರ್ಥಿಗಳು ಕಾರ್ಗಿಲ್ ವಿಜಯೋತ್ಸವಕ್ಕೆ ಆಗಮಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚದ ಜಿಲ್ಲಾ ಕಾರ್ಯದರ್ಶಿ ಬಾಲುಶೆಟ್ಟಿ, ತಾಲೂಕು ಅಧ್ಯಕ್ಷ ತಾರೇಶ್, ಪ್ರಧಾನ ಕಾಯದರ್ಶಿ ಶಶಿ ಕೆಲ್ಲೂರು ಉಪಸ್ಥಿತರಿದ್ದರು.