ಇತ್ತೀಚೆಗೆ ಥೈಲ್ಯಾಂಡ್ ನಲ್ಲಿ ನಡೆದ ಇಂಟರ್ ನ್ಯಾಷನಲ್ ಬ್ಯಾಂಡಿ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಎಐಟಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ಪ್ರಜ್ಞಾ ಚಿನ್ನದ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಜುಲೈ 1ರಿಂದ 5ರವರೆಗೆ ಥೈಲ್ಯಾಂಡ್ ನಲ್ಲಿ ನಡೆದ 4ನೇ ಅಂತರಾಷ್ಟ್ರೀಯ ಐಸ್ ಹಾಕಿ ಬ್ಯಾಂಡಿ ಸ್ಫರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಲಕ್ಷ್ಮೀ ಪ್ರಜ್ಞಾ ಅತ್ಯುತ್ತಮ ಪ್ರದರ್ಶನ ತೋರಿ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.
ಮೂಡಿಗೆರೆ ತಾಲ್ಲೂಕು ಕೋಡದಿಣ್ಣೆ ಗ್ರಾಮದ ಚಿಕ್ಕಮಗಳೂರು ನಿವಾಸಿಗಳಾದ ಸುರೇಶ್ ಗೌಡ ಮತ್ತು ಮಮತ ದಂಪತಿಗಳ ಪುತ್ರಿಯಾದ ಲಕ್ಷ್ಮೀ ಪ್ರಜ್ಞಾ ಪ್ರಸ್ತುತ ಚಿಕ್ಕಮಗಳೂರು ಎಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ.
ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಅತೀವ ಆಸಕ್ತಿ ಬೆಳೆಸಿಕೊಂಡಿರುವ ಲಕ್ಷ್ಮೀ ಪ್ರಜ್ಞಾ ಬ್ಯಾಂಡ್ ಹಾಕಿ ಸ್ಪರ್ಧೆಗಳಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಐಸ್ ಮೇಲೆ ನಡೆಯುವ ಈ ವಿಶಿಷ್ಠವಾದ ಆಟದಲ್ಲಿ ಪರಿಣತಿ ಸಾಧಿಸಿ ಇದೀಗ ಅಂತರಾಷ್ಟ್ರಿಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಎ.ಐ.ಟಿ. ಕಾಲೇಜು, ಚಿಕ್ಕಮಗಳೂರು ಜಿಲ್ಲೆ ಮತ್ತು ಭಾರತ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಲಕ್ಷ್ಮೀ ಪ್ರಜ್ಞಾ ಅವರಿಗೆ ಅವರ ತರಬೇತುದಾರರಾದ ಗುರುಮೂರ್ತಿಯವರು ಹೆಚ್ಚಿನ ಪ್ರೋತ್ಸಾಹ ನೀಡಿ ತರಬೇತುಗೊಳಿಸಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮುಂದಿನ ಸುತ್ತಿನ ಅಂತರಾಷ್ಟ್ರೀಯ ಸ್ಪರ್ಧೆ ರಷ್ಯಾದಲ್ಲಿ ನಡೆಯುತ್ತಿದ್ದು, ಲಕ್ಷ್ಮೀ ಪ್ರಜ್ಞಾ ಆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಲಕ್ಷ್ಮೀ ಪ್ರಜ್ಞಾ ಸಾಧನೆಗೆ ಅವರ ಪೋಷಕರು, ಕುಟುಂಬದವರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.