ರೈತರು ಹವಾಮಾನ ಆಧಾರಿತ ಬೆಳೆವಿಮೆಯನ್ನು ಕಟ್ಟಲು ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಅವಕಾಶವಿದೆ. ಆದರೆ ರೈತರ ಪಹಣಿಗಳಲ್ಲಿ ಬೆಳೆ ಕಾಲಂ ಭರ್ತಿ ಮಾಡದೇ ಇರುವುದರಿಂದ ಬಹುತೇಕ ರೈತರಿಗೆ ಬೆಳೆವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಅವರಿಗೆ ಮನವಿ ಮಾಡಿದ್ದಾರೆ.
ಇಂದು ತಾಲ್ಲೂಕು ಕಛೇರಿಯಲ್ಲಿ ತಹಸೀಲ್ದಾರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮುಖಂಡರು ; ಮಲೆನಾಡು ಭಾಗದಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆಯನ್ನು ಬೆಳೆವಿಮೆ ವ್ಯಾಪ್ತಿಗೆ ಸೇರಿಸಬೇಕು. ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮೆ ಕಟ್ಟಲು ಜುಲೈ 30 ಕೊನೆಯ ದಿನವಾಗಿರುತ್ತದೆ. ಆದರೆ ಬಹುತೇಕ ರೈತರ ಪಹಣಿಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳು ದಾಖಲಾಗಿಲ್ಲ. ಬೆಳೆಕಾಲಂನಲ್ಲಿ ಬೆಳೆಗಳ ಹೆಸರಿಲ್ಲದೇ ವಿಮೆ ಕಂತು ಕಟ್ಟಲು ಅವಕಾಶ ಇಲ್ಲ. ಇದರಿಂದ ಬಹುತೇಕ ರೈತರು ಬೆಳೆವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಕಾಫಿ ಅಡಿಕೆ ಕಾಳುಮೆಣಸು ಇವೆಲ್ಲ ಬಹುವಾರ್ಷಿಕ ಬೆಳೆಗಳಾಗಿರುವುದರಿಂದ ಪ್ರತಿ ವರ್ಷ ಬೆಳೆ ಸಮೀಕ್ಷೆ ನಡೆಸುವ ಅವಶ್ಯಕತೆಯಿರುವುದಿಲ್ಲ. ಒಮ್ಮೆ ಬೆಳೆ ಸಮೀಕ್ಷೆ ಮಾಡಿದರೆ ಕನಿಷ್ಠ ಐದು ವರ್ಷ ಅದೇ ಬೆಳೆಯನ್ನು ನಮೂದಿಸಬಹುದಾಗಿದೆ.
ಈ ವರ್ಷ ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯಾಗುತ್ತಿದ್ದು, ಬಹುತೇಕ ಬೆಳೆಗಳು ನೆಲಕಚ್ಚುತ್ತಿವೆ. ಈ ಸಂದರ್ಭದಲ್ಲಿ ಬೆಳೆವಿಮೆ ಮಾಡಿಸಿದರೆ ರೈತರಿಗೆ ಕೊಂಚ ಮಟ್ಟಿಗೆ ಪರಿಹಾರ ದೊರಕುವ ಸಾಧ್ಯತೆಯಿದೆ. ಆದರೆ ಈಗ ಬೆಳೆ ಕಾಲಂ ಸಮಸ್ಯೆಯಿಂದ ರೈತರು ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ
ಈ ಬಗ್ಗೆ ಸೂಕ್ತವಾಗಿ ಗಮನ ಹರಿಸಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಪಿ. ರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ. ದಯಾಕರ್, ಜಿಲ್ಲಾ ಉಪಾಧ್ಯಕ್ಷ ಪಿ.ಕೆ. ನಾಗೇಶ್, ಮುಖಂಡರಾದ ಡಿ.ಎಸ್. ರಮೇಶ್ ಮುಂತಾದವರು ಇದ್ದರು.