ಮೂಡಿಗೆರೆ ತಾಲ್ಲೂಕಿನ ದೇವರಮನೆ, ಕೋಗಿಲೆ, ಗುತ್ತಿ, ಹೆಸಗೋಡು, ಗುತ್ತಿಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಒಂಟಿ ಸಲಗವೊಂದು ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಕೋಗಿಲೆ ಗ್ರಾಮದ ಕೃಷಿಕ ಮದನ್ ಅವರ ಮನೆಯ ಬಳಿ ಹಾಡಹಗಲೇ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ದೇವರಮನೆಗೆ ಸಾಗುವ ವಾಹನ ಸವಾರರಿಗೆ, ಪ್ರವಾಸಿಗರಿಗೆ ತೊಂದರೆಯಾಗಿದೆ. ಸ್ಥಳೀಯರು ಇದೇ ಹಿಂದೆ ಕಾಟ ಕೊಡುತ್ತಿದ್ದ ಬೈರ ಆನೆ ಎಂದು ಕರೆಯುತ್ತಿದ್ದಾರೆ. ದೇವರಮನೆ ಭಾಗದಲ್ಲಿ ಕಾಡಾನೆ ಸಂಚರಿಸುತ್ತಿರುವುದರಿಂದ ಪ್ರವಾಸಿಗರು, ಸ್ಥಳೀಯರು ಎಚ್ಚರಿಕೆಯಿಂದ ಓಡಾಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉಪವಲಯ ಅರಣ್ಯ ಅಧಿಕಾರಿ ಬಸವರಾಜ್ ಮಾತನಾಡಿ’ ಕೋಗಿಲೆಯಲ್ಲಿ ಭಾನುವಾರ ರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುತ್ತಿದ್ದ ಕಾಡಾನೆ ಸಂಚರಿಸುತ್ತಿದೆ. ಆನೆಯ ಕಾರ್ಯ ಪಡೆಯ ತಂಡದ ಪರಮೇಶ್ ತಂಡ ಕೋಗಿಲೆ ಗ್ರಾಮಕ್ಕೆ ಹೋಗಿ ಕಾಡಾನೆ ಓಡಿಸಲು ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಓಡಿಸಲಾಗಿದೆ.ಆದರೆ ಅದು ರಾತ್ರಿಯ ಸಮಯದಲ್ಲಿ ರಸ್ತೆಗೆ ಬರುತ್ತಿದೆ. ಆನೆ ಕಾರ್ಯ ಪಡೆ ತಂಡ ಕೋಗಿಲೆ ಗ್ರಾಮಕ್ಕೆ ಸಾಗಿದ್ದು ಆನೆ ಕಾಡಿಗೆ ಓಡಿಸಲು ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿಗಳು ಭಾಗವಹಿಸಿದ್ದಾರೆ.