ಮೂಡಿಗೆರೆ ತಾಲ್ಲೂಕಿನ, ಬಣಕಲ್, ಕೊಟ್ಟಿಗೆಹಾರ, ಬಾಳೂರು, ಗುತ್ತಿ, ಊರುಬಗೆ ಸುತ್ತಮುತ್ತ ಧಾರಾಕಾರ ಮಳೆ ಸುರಿಯುತಿದೆ.
ತೀವ್ರ ಮಳೆಗೆ ಕೂಲಿ ಕಾರ್ಮಿಕರು ಕೂಡ ಕೆಲಸಕ್ಕೆ ಹೋಗದೇ ಮನೆಯಲ್ಲೇ ಉಳಿಯುವಂತಾಗಿದೆ. ಚಾರ್ಮಾಡಿ ಘಾಟಿಯಲ್ಲಿ ನಿರಂತರ ಧಾರಾಕಾರ ಮಳೆ ಸುರಿದು ಮಂಜು ಮುಸುಕಿನ ವಾತಾವರಣ ಕಂಡು ಬರುತ್ತಿದ್ದು, ಮಂಜು ಮುಸುಕಿನ ವಾತಾವರಣದಿಂದ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದಾರೆ.
ಸೋಮವಾರ ಬಣಕಲ್ ಸಮೀಪದ ಕೋಗಿಲೆ ರಸ್ತೆಯಲ್ಲಿ ಮರ ರಸ್ತೆಗೆ ಉರುಳಿ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಕೋಗಿಲೆಯ ಗ್ರಾಮಸ್ಥರು ಮರವನ್ನು ತೆರವುಗೊಳಿಸಿದರು. ಬಣಕಲ್ ಸಮೀಪದ ಗುಡ್ಡಹಟ್ಟಿ ಬಳಿ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದು ಕಂಬ ತುಂಡಾಗಿ ಹಾನಿಯಾಗಿದೆ.
ಬಣಕಲ್ ರಾಷ್ಟ್ರೀಯ ಹೆದ್ದಾರಿಯ ಹಳೆ ಅಂಚೆ ಕಚೇರಿ ಬಳಿಯಲ್ಲಿ ಚರಂಡಿ ಮುಚ್ಚಿ ಹೋಗಿರುವುದರಿಂದ ಧಾರಾಕಾರ ಸುರಿದ ಮಳೆಗೆ ನೀರು ಹೆದ್ದಾರಿಯ ಮೇಲೆ ಹರಿಯುತಿದೆ. ವಾಹನ ಸವಾರರು ರಸ್ತೆ ಮೇಲೆ ವಾಹನ ಚಲಾಯಿಸಲು ಪರದಾಡಿದರು. ಕೆಲವು ದಿನಗಳ ಹಿಂದೆಯೂ ಇದೇ ಹೆದ್ದಾರಿಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿಯಾಗಿತ್ತು. ರಸ್ತೆಯಲ್ಲಿ ನೀರು ಮೇಲಿನ ಒಳ ರಸ್ತೆಯಿಂದ ಕೆಳ ಹೆದ್ದಾರಿಗೆ ಹರಿಯುತ್ತಿರುವುದರಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಚರಂಡಿಗಳ ಸೂಕ್ತ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.