ಕಾಫಿನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅಲ್ಲಲ್ಲಿ ಮನೆಗಳು ಕುಸಿದು ಅಪಾರ ಹಾನಿಯಾಗಿದೆ. ಕಳೆದ ಎರಡು ದಿನದಿಂದ ಬಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಹೇಮಾವತಿ ನದಿ ಸೇರಿದಂತೆ ಕೆರೆಕಟ್ಟೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೋಮವಾರ ರಾತ್ರಿ ಸುರಿದ ಮಳೆಗೆ ಪಲ್ಗುಣಿ ಗ್ರಾಮದ ಚಂದ್ರಶೇಖರ್ ಮನೆ ಮೇಲೆ ಅಡಿಕೆ ಮರ ಬಿದ್ದು, ಮೇಲ್ಛಾವಣಿ ಹಾನಿಯಾಗಿದೆ.ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದ ಕಾಂಪೌಂಡ್ ಗೋಡೆ ಕುಸಿದಿದೆ.
ಬಣಕಲ್ ಗುಡ್ಡಟ್ಡಿ ಗ್ರಾಮದ ನವೀನ್ ಎಂಬುವರ ಮನೆ ಭಾಗಶಃ ಕುಸಿದಿದೆ. ಕೆಳಗೂರು ಮೂಲೆಮನೆ ಎಸ್ಟೇಟ್ ಕೂಲಿ ಲೈನ್ ಮನೆ ಮೇಲೆ ಮರ ಬಿದ್ದು, ಮನೆಯೊಳಗಿದ್ದ ಪೂರ್ಣಿಮ (32), ಪ್ರಣಬ್ (32) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸುಣ್ಣದಗೂಡು ಗ್ರಾಮದ ತಾಹೀರಾ ಎಂಬುವರ ಮನೆ ಮೇಲೆ ಮರ ಬಿದಿದ್ದು, ಮನೆ ಭಾಗಶಃ ಹಾನಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೆಳಗೂರು ಮಾಳಿಂಗನಾಡು ರಸ್ತೆಯುದ್ದಕ್ಕೂ 7 ಮರ ನೆಲಕ್ಕುರುಳಿದ್ದು, ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು. ಅದನ್ನು ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯ ನಡೆಸಿದರು.
ವಿವಿದೆಡೆ ವಿದ್ಯುತ್ ಕಂಬಗಳು ಹಾನಿಯಾಗಿದ್ದು ಕಳೆದ ಎರಡು ದಿನದಿಂದ ವಿದ್ಯುತ್ ಇಲ್ಲದೇ ಜನರು ಕತ್ತಲಲ್ಲಿ ಕಳೆಯುವಂತಾಗಿದೆ. ಕೊಟ್ಟಿಗೆಹಾರದ ಅಜಾದ್ ನಗರದ ಸುರೇಶ್ ಎಂಬವರ ಮನೆಯ ಹಿಂಭಾಗದ ಮೇಲ್ಛಾವಣಿ ಕುಸಿದು ಹಾನಿ ಸಂಭವಿಸಿದೆ. ಅದೇ ಗ್ರಾಮದ ಪವಿತ್ರ ಸುಬ್ರಾಯ ಅವರ ಮನೆಗೂ ಹಾನಿಯಾಗಿದೆ. ಬಣಕಲ್ ಸೂರ್ಯ ಅವರ ಮನೆ ಮನೆಗೆ ಕುಸಿತಗೊಂಡಿದ್ದು ಹಾನಿಯಾದ ಸ್ಥಳಗಳಿಗೆ ಕಂದಾಯ ಅಧಿಕಾರಿ ಮಂಜುನಾಥ್,ತರುವೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ನಾಯ್ಕ್, ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಅತಿಕಾಭಾನು,ಇರ್ಫಾನ್ ಮತ್ತಿತರರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಮೂಡಿಗೆರೆ ಬಿಳಗುಳ ಸಮೀಪ ಬೃಹತ್ ಮರವೊಂದು ಉರುಳಿದ್ದು, ಹಲವು ವಿದ್ಯುತ್ ಕಂಬಗಳು ತುಂಡಾಗಿವೆ.
ಕೊಪ್ಪ ಶೃಂಗೇರಿ, ಕಳಸ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು ತುಂಗಾ, ಭದ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಕಳಸ ಹೊರನಾಡು ನಡುವಿನ ಹೆಬ್ಬೊಳೆ ಬಳಿ ಭದ್ರನದಿ ಸೇತುವೆ ಮೇಲೆ ಉಕ್ಕಿ ಹರಿಯುತ್ತಿದೆ.
ಕೊಪ್ಪ ಜಯಪುರ ನಡುವಿನ ಮುಖ್ಯ ರಸ್ತೆ ನಾರ್ವೆ ಬಳಿಯಲ್ಲಿ ಕುಸಿಯುವ ಹಂತಕ್ಕೆ ತಲುಪಿದ್ದು, ರಸ್ತೆ ಬದಿ ದೊಡ್ಡ ಕಂದಕ ಸೃಷ್ಟಿಯಾಗಿದೆ.