ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ ಅನೇಕ ಕಡೆಗಳಲ್ಲಿ ಅನಾಹುತಗಳು ಸಂಭವಿಸುತ್ತಿವೆ. ವಿವಿಧೆಡೆ ಮನೆಗಳು ಕುಸಿದು ಜನರು ಬೀದಿಪಾಲಾಗುತ್ತಿದ್ದಾರೆ.
ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಹಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಗ್ರಾಮದಲ್ಲಿ ಪಾರ್ವತಮ್ಮ ಎನ್ನುವ ಕಾರ್ಮಿಕ ಮಹಿಳೆಯ ಮನೆ ಬಾರೀ ಮಳೆಯಿಂದ ಸಂಪೂರ್ಣ ಕುಸಿದಿದೆ.
ಮನೆಯ ಬಹುತೇಕ ಗೋಡೆ ಮತ್ತು ಮೇಲ್ಚಾವಣಿ ಕುಸಿದಿದ್ದು, ವಯಸ್ಕ ಮಹಿಳೆ ಈಗ ದಿಕ್ಕುತೋಚದಂತಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಪಾರ್ವತಮ್ಮ ಮುಂದೇನು ? ಎಂದು ಚಿಂತಿತರಾಗಿದ್ದು, ಸದ್ಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಕಾರ್ಮಿಕ ಮಹಿಳೆ ಪಾರ್ವತಮ್ಮ ಅವರಿಗೆ ಸೂಕ್ತ ಪರಿಹಾರ ನೀಡಿ ಅವರಿಗೆ ತಕ್ಷಣ ಪುನರ್ವಸತಿ ಮತ್ತು ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.