ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಪ್ರಕರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಖರೀದಿಸಿದ್ದ 3.3 ಕೋಟಿ ರೂಪಾಯಿ ಮೌಲ್ಯದ ಲಂಬೋರ್ಗಿನಿ ಕಾರನ್ನು ವಶಪಡಿಸಿಕೊಂಡಿದೆ.
ನಿಗಮದಿಂದ ನಕಲಿ ಖಾತೆಗಳಿಗೆ ವರ್ಗಾವಣೆಯಾದ ಹಣದ ಜಾಡು ಹಿಡಿದ ಎಸ್ಐಟಿ ಹೈದರಾಬಾದ್ನಲ್ಲಿ ಬಂಧಿತನಾಗಿದ್ದ ಸತ್ಯನಾರಾಯಣ ವರ್ಮಾ ಐಷಾರಾಮಿ ಕಾರು ಡೀಲರ್ಗೆ 3.3 ಕೋಟಿ ರೂಪಾಯಿ ನೀಡಿದ್ದರು. ಎಸ್ಐಟಿ ಅಧಿಕಾರಿಗಳು ಕಾರನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಡೀಲರ್ಗೆ ಹಿಂತಿರುಗಿಸಿದ್ದು ಹಣವನ್ನೂ ಜಪ್ತಿ ಮಾಡಿದೆ.
ಹಗರಣದಲ್ಲಿ ಸತ್ಯನಾರಾಯಣ ವರ್ಮಾ 13ನೇ ಆರೋಪಿಯಾಗಿದ್ದಾರೆ.
ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಅಕ್ರಮವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿ ದುರುಪಯೋಗಪಡಿಸಿಕೊಂಡಿರುವ ಹಗರಣ ನಡೆದಿದ್ದು, ಈಗಾಗಲೇ ತನಿಖೆಯನ್ನು ಎಸ್.ಐ.ಟಿ. ವಹಿಸಲಾಗಿದೆ. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿದ್ದು, ಇದೀಗ ನಾಗೇಂದ್ರ ಅವರ ಮನೆ ಮೇಲೆ ಈಡಿ ದಾಳಿಯಾಗಿ ನಾಗೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.