ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಯಲಹಂಕದಲ್ಲಿ ನ್ಯಾಯಾಧೀಶರ ಮನೆಯಲ್ಲಿ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಇಂದು ಮುಂಜಾನೆ ಹಾಜರು ಪಡಿಸಿದ್ದರು. ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಮೊನ್ನೆಯಿಂದ ನಾಗೇಂದ್ರ ಇಡಿ ದಾಳಿಗೆ ಒಳಗಾಗಿದ್ದಾರೆ.
ನಾಗೇಂದ್ರರನ್ನು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಾಯಿತು. 5 ದಿನಗಳ ಕಾಲ ಕಸ್ಟಡಿಗೆ ನೀಡಿದ ನ್ಯಾಯಾಧೀಶರು, 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿ ಆದೇಶಿಸಿದರು. ನ್ಯಾಯಾಧೀಶರ ಮುಂದೆ ತಮ್ಮ ಅನಾರೋಗ್ಯ ಸಮಸ್ಯೆಯನ್ನು ನಾಗೇಂದ್ರ ತಿಳಿಸಿದರು. ಬಿಪಿ, ಜೊತೆಗೆ ಸುಸ್ತು ಎಂದರು. ಪ್ರತಿ ದಿನ ಮೂರು ಗಂಟೆ ವಿಚಾರಣೆ ನಡೆಸಬಹುದು, ವಿಚಾರಣೆ ಬಳಿಕ 30 ನಿಮಿಷಗಳ ಕಾಲ ರೆಸ್ಟ್ ನೀಡಬೇಕು ಹಾಗೂ ಪ್ರತಿ ದಿನ ವೈದ್ಯಕೀಯ ತಪಾಸಣೆ ಮಾಡುವಂತೆ ನ್ಯಾಯಧೀಶರು ಸೂಚಿಸಿದರು.
ಜಡ್ಜ್ ಮುಂದೆ ನಾಗೇಂದ್ರ ಹೇಳಿಕೆ ನೀಡಿದ್ದು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ʼಇದು ಬೋರ್ಡ್ ಮಿಟೀಂಗ್ ಮೂಲಕ ಆಗಿರುವ ಹಣ ವರ್ಗಾವಣೆ. ನಾನು ಇಲಾಖೆ ಸಚಿವಾನಾಗಿದ್ದೆ ಅಷ್ಟೇ. ಅಕ್ರಮ ಹಣ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನನಗೆ ಮೆಡಿಕಲ್ ನೆರವು ಅವಶ್ಯಕತೆ ಇದೆʼ ಎಂದು ನಾಗೇಂದ್ರ ಮನವಿ ಮಾಡಿದರು. ಅಹವಾಲು ಹಿನ್ನೆಲೆಯಲ್ಲಿ, 24 ಗಂಟೆಗೊಮ್ಮೆ ಆರೋಗ್ಯ ತಪಾಸಣೆಗೆ ಕರೆದೊಯ್ಯುವಂತೆ ಇಡಿಗೆ ಸೂಚನೆ ನೀಡಲಾಯಿತು.
ನಾಗೇಂದ್ರರನ್ನು ಹೆಚ್ಚಿನ ವಿಚಾರಣೆ ಮಾಡಬೇಕು. ಬಹುಕೋಟಿ ಹಗರಣ ಆಗಿದೆ. ಹಣ ವರ್ಗಾವಣೆ ಮಾಹಿತಿ ಕಲೆ ಹಾಕಬೇಕಿದೆ. ಫಲಾನುಭವಿಗಳನ್ನು ಪತ್ತೆ ಹಚ್ಚಬೇಕಿದೆ. ಅವ್ಯವಹಾರ ಯಾವ ರೀತಿ ಆಗಿದೆ ಅನ್ನುವ ವಿಚಾರಣೆ ನಡೆಸಬೇಕಿದೆ. ಇಲಾಖೆಗೆ ಸಚಿವರಾಗಿದ್ದರಿಂದ ಹೆಚ್ಚಿನ ವಿಚಾರಣೆ ಅಗತ್ಯ ಇದೆ. ಹೀಗಾಗಿ 14 ದಿನ ಕಸ್ಟಡಿಗೆ ಕೊಡಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕೇಳಿದ್ದರು.