ಮೂಡಿಗೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಬಣಕಲ್ ಪೊಲೀಸರು ಗಸ್ತು ತಿರುಗಿ ಮೋಜು ಮಸ್ತಿ ಮಾಡುವ ಪ್ರವಾಸಿಗರಿಗೆ ಬಿಸಿಮುಟ್ಟಿಸಿದ್ದು, ದಂಡದ ಜೊತೆಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಸೋಮವಾರ ಸ್ಥಳಕ್ಕೆ ಬೇಟಿ ನೀಡಿದ್ದ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಮಾತನಾಡಿ’ ದೇವರಮನೆ ತಾಣ ಭಕ್ತಿಯ ತಾಣವಾಗಿದ್ದು ಇಲ್ಲಿ ಶ್ರೀಕಾಲಭೈರವೇಶ್ವರ ದೇವಸ್ಥಾನವಿದೆ.ಇಲ್ಲಿ ನಿತ್ಯ ಪ್ರವಾಸಿಗರು ಮೋಜು ಮಸ್ತಿ ಮಾಡಿ ಸಂಚಾರ ದಟ್ಟಣೆ ಮಾಡಿ ಜನರಿಗೆ ಕಿರಿಕಿರಿ ತರುವ ಸನ್ನಿವೇಶ ನಿರ್ಮಾಣವಾಗುತ್ತಿದೆ.ವಾರಾಂತ್ಯದಲ್ಲಿ ಅಲ್ಲದೇ ಈಗ ನಿತ್ಯದ ದಿನಗಳಲ್ಲೂ ಪ್ರವಾಸಿಗರು ಅದರಲ್ಲೂ ಯುವಕರು ಮದ್ಯಪಾನ ಮಾಡಿ ಕೂಗಾಡುವ ದೃಶ್ಯ ಕಂಡು ಬರುತ್ತಿದೆ.
ಸಿಬ್ಬಂದಿಯೊಂದಿಗೆ ದೇವರಮನೆಗೆ ಬೇಟಿ ನೀಡಿ ಮದ್ಯಪಾನ ಮಾಡಿದ ಯುವಕರಿಗೆ ದಂಡ ವಿಧಿಸಿ ಎಚ್ಚರಿಸಲಾಗಿದೆ. ಪರಿಸರ ಕಲುಷಿತ ಮಾಡುವವರಿಗೆ ಕಡಿವಾಣ ಹಾಕಲಾಗುವುದು. ಪ್ರವಾಸಿಗರು ದೇವಸ್ಥಾನಕ್ಕೆ ಬೇಟಿ ಕೊಟ್ಟು ಪರಿಸರ ಅಸ್ವಾಧನೆ ಮಾಡುವುದು ಒಳಿತು. ಹಾಗಂತ ಮೋಜು ಮಸ್ತಿಗೆ ಅವಕಾಶ ನೀಡುವುದಿಲ್ಲ. ಟ್ರಾಫಿಕ್ ಜಾಮ್ ಮಾಡಿ ಜನರಿಗೆ ತೊಂದರೆ ಕೊಡುವವರಿಗೂ ಲಾಠಿ ರುಚಿ ತೋರಿಸುತ್ತೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಈ ಸಂದರ್ಭದಲ್ಲಿ ಎಎಸ್ಐ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿಗಳಾದ ಅಶೋಕ್, ವರ್ಷಿಣಿ ಇದ್ದರು.