ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಜಾವಳಿಯ ಹೇಮಾವತಿಯಲ್ಲಿ ಬಿಎಸ್ ಎನ್ ಎಲ್ ಟವರ್ ಕಾರ್ಯ ನಿರ್ವಹಿಸದೇ ಹದಿನೈದು ದಿವಸ ಕಳೆದಿದೆ. ಇದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಗ್ರಾಹಕ ಬಿ.ಎಸ್.ಸುರೇಶ್ ಮಾತನಾಡಿ ನಾವು ಹಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ನೆಟ್ ವರ್ಕ್ ಹೊಂದಿದ್ದೇವೆ. ಆದರೆ ಮೊದಲೆಲ್ಲಾ ವಿದ್ಯುತ್ ಇಲ್ಲವಾದರೆ ನೆಟ್ ವರ್ಕ್ ಸಮಸ್ಯೆ ಇರುತ್ತಿತ್ತು. ಆದರೀಗ ವಿದ್ಯುತ್ ಇದ್ದರೂ ಹದಿನೈದು ದಿನ ಕಳೆದರೂ ಮೊಬೈಲ್ ನೆಟ್ ವರ್ಕ್ ಲಭ್ಯವಿಲ್ಲ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಬಿಎಸ್ಎನ್ಎಲ್ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ. ಸರ್ಕಾರಿ ಸಂಸ್ಥೆಗಳು ನಷ್ಟ ಹೊಂದಲು ಕಾರಣವೇ ಅಧಿಕಾರಿಗಳ ನಿರ್ಲಕ್ಷ್ಯ ಇದರಿಂದ ಸಂಸ್ಥೆ ನಷ್ಟ ಅನುಭವಿಸುವಂತಾಗಿದೆ ಎಂದಿದ್ದಾರೆ.
ಅನೇಕ ಗ್ರಾಹಕರನ್ನು ಹೊಂದಿರುವ ಬಿಎಸ್ಎನ್ಎಲ್ ತಮ್ಮ ನೆಟ್ ವರ್ಕ್ ಸಮಸ್ಯೆಯನ್ನು ಸರಿ ಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು .ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಎನ್ಎಲ್ ನೆಟ್ ವರ್ಕ್ ಉತ್ತಮ ಸೇವೆ ನೀಡುತ್ತಿದ್ದು ಈಗ ಅದರ ಸೇವೆ ಸಂಪೂರ್ಣ ನಿಲ್ಲಿಸಿದಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಸೇವೆ ನೀಡುವಂತೆ ಗ್ರಾಹಕರು ಆಗ್ರಹಿಸಿದ್ದಾರೆ.