ಅಂಚೆ ಇಲಾಖೆಯು ದೇಶದ ಜನರಿಗೆ ಕಡಿಮೆ ಪ್ರಿಮಿಯಂ ಮೂಲಕ ದೊಡ್ಡ ಮೊತ್ತದ ಅಪಘಾತ ವಿಮೆ ನೀಡುವ ವಿನೂತನ ಯೋಜನೆ ಜಾರಿಗೆ ತಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ನೂತನ ವಿಮಾ ಯೋಜನೆಯಡಿಯಲ್ಲಿ ವರ್ಷಕ್ಕೆ 520 ರೂ. ವಿಮಾ ಕಂತು ಪಾವತಿಸಿದರೆ 10 ಲಕ್ಷ ರೂ. ಅಪಘಾತ ವಿಮೆ ಮತ್ತು 749 ರೂ. ಪಾವತಿಸಿದರೆ 15 ಲಕ್ಷ ರೂ. ವಿಮಾ ಮೊತ್ತದ ಸೌಲಭ್ಯ ದೊರಕಲಿದೆ ಎಂದು ಹೇಳಿದರು. ಪಾಲಿಸಿದಾರರು ಅಪಘಾತಕ್ಕೀಡಾದರೆ ಮತ್ತು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದರೆ, ರೂ. 60,000 ಮರುಪಾವತಿ ಮಾಡಲಾಗುತ್ತದೆ.
ಅಂಚೆ ಇಲಾಖೆಯ ವೈಯಕ್ತಿಕ ಅಪಘಾತ ಯೋಜನೆಯಡಿ ಹೆಚ್ಚಿನ ಜನರನ್ನು ನೋಂದಾಯಿಸಲು ಇತ್ತೀಚೆಗೆ ನಡೆಸಿದ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಪ್ರತಿದಿನ ಸರಾಸರಿ 5,000 ಜನರು ಈ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ಈ ಯೋಜನೆಯು ರಾಜ್ಯದ ಎಲ್ಲ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಪೋಸ್ಟ್ಮ್ಯಾನ್ ಮೂಲಕ ಮನೆ ಬಾಗಿಲಿಗೂ ತಲುಪಿಸಲಾಗುತ್ತದೆ.
ಈ ಯೋಜನೆ ಆರಂಭವಾದಾಗಿನಿಂದ ಕರ್ನಾಟಕದಲ್ಲಿ 4.5 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಸಾವಿಗೆ ಸಂಬಂಧಿಸಿದ ಒಟ್ಟು 66 ಕ್ಲೈಮ್ಗಳನ್ನು ಪ್ರಕ್ರಿಯೆಗೊಳಿಸಲಾಗಿದೆ ಮತ್ತು ವೈದ್ಯಕೀಯ ಮರುಪಾವತಿಗೆ ಸಂಬಂಧಿಸಿದ ಒಟ್ಟು 256 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ದಿನದಿಂದ ದಿನಕ್ಕೆ ಸಂಖ್ಯೆಗಳು ಹೆಚ್ಚಾಗುತ್ತಿವೆ’ ಎಂದು ಸಿಪಿಎಂಜಿ ಮಾಹಿತಿ ನೀಡಿದೆ.
ರಸ್ತೆ ಅಪಘಾತ ಸೇರಿದಂತೆ, ವಿದ್ಯುತ್ ಅವಘಡ, ಹಾವು ಕಚ್ಚುವುದು, ಅಗ್ನಿ ಅವಘಡ, ಜಾರಿ ಬಿದ್ದು ಸಾವನ್ನಪ್ಪುವುದು ಹೀಗೆ ಆಕಸ್ಮಿಕ ಸಾವುಗಳು ಈ ಯೋಜನೆಯ ಅಡಿ ವಿಮಾ ಮೊತ್ತ ಪಡೆಯಲು ಅರ್ಹವಾಗಿರುತ್ತವೆ. ಪಾಲಿಸಿದಾರ ಅಪಘಾತದಿಂದ ಸಾವನ್ನಪ್ಪಿದಾಗ ನಾಮಿನಿಗೆ ವಿಮಾ ಮೊತ್ತ ದೊರೆಯಲಿದೆ.
ವಿಮಾ ಸೌಲಭ್ಯ ಪಡೆಯಲು ಬಯಸುವವರು ತಮ್ಮ ಸಮೀಪದ ಅಂಚೆ ಕಛೇರಿಯನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿದ ಶಿಲ್ಕು ರಹಿತ ಡಿಬಿಟಿ ಖಾತೆ ತೆರೆಯಬಹುದು. ಈ ಯೋಜನೆಯು ವಾರ್ಷಿಕವಾಗಿ ಸ್ವಯಂ ನವೀಕರಣಗೊಳ್ಳುತ್ತದೆ ಎಂದಿದ್ದಾರೆ.