ಮದ್ಯದ ಅಂಗಡಿ ನುಗ್ಗಿ ಡ್ರಿಂಕ್ಸ್ ಜೊತೆ ಲಕ್ಷಾಂತರ ಹಣವನ್ನು ದೋಚಿಕೊಂಡು ಹೋಗಿದ್ದ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಕುರಿಕಳ್ಳ, ಮತ್ತೊಬ್ಬ ದೇವಸ್ಥಾನದ ಹುಂಡಿ ಕಳ್ಳ, ಇನ್ನೊಬ್ಬ ನಕಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸದಸ್ಯನಾಗಿದ್ದಾನೆ, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಈ ಮೂವರು ಎಣ್ಣೆ ಕಳ್ಳರು, ವಿವಿಧ ಜಿಲ್ಲೆ ಸುತ್ತಿ ಎಣ್ಣೆ ಅಂಗಡಿಗಳನ್ನು ದೋಚುವುದೇ ಇವರ ಕೆಲಸ, ನಗರ ಪ್ರದೇಶಗಳಿಂದ ದೂರ ಇರುವ ಎಣ್ಣೆ ಅಂಗಡಿಗಳೇ ಇವರ ಟಾರ್ಗೆಟ್ ಆಗಿತ್ತು.
ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದಾರೆ. ಇವರಲ್ಲಿ ಇಬ್ಬರು ಡ್ರೈವರ್ ಗಳು ಮತ್ತೊಬ್ಬ ಮಾನವ ಹಕ್ಕುಗಳ ಆಯೋಗದ ಸದಸ್ಯ, ಕಳೆದ ಮೇ 5 ರಂದು ಮರ್ಲೆ ಗ್ರಾಮದ ಎಂಎಸ್ಐಎಲ್ ಮದ್ಯದ ಅಂಗಡಿಗೆ ಕನ್ನ ಹಾಕಿದ್ದ ಇವರ ಬೆನ್ನಿಗೆ ಬಿದ್ದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ಕುಮಾರ್ ನೇತೃತ್ವದ ತಂಡ ಮೂವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಲೆಬಾಳುವ ಮದ್ಯದ ಬಾಟಲಿಗಳು, ಬಿಯರ್ ಬಾಟಲ್ ಸೇರಿದಂತೆ ಲೋಕಲ್ ಎಣ್ಣೆಗಳನ್ನು ಕಳ್ಳತನ ಮಾಡಿ, 7,41,160 ರೂಪಾಯಿ ಹಣವನ್ನು ಎಗರಿಸಿದ್ದ ಖದೀಮರು ಕುಡಿದು ಹಣ ಎಲ್ಲಾ ಕಾಲಿ ಮಾಡಿ ಉಳಿಸಿದ್ದ 10 ಬಿಯರ್ 5 ಕ್ವಾಟರ್ ವಿಸ್ಕಿ, 60 ml ನ 20 ಬಾಟಲಿ ಜೊತೆಗೆ 52200 ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಕುರಿಕಳ್ಳ ಜಗದೀಶ್ ಹೊಳೆನರಸೀಪುರದವನಾದರೆ, ದೇವಸ್ಥಾನದ ಹುಂಡಿ ಕಳ್ಳ ದರ್ಶನ್ ಹಾಗೂ ನಕಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸದಸ್ಯ ರಘುಕಮಾರ್ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ.